ಬೆಂಗಳೂರು: ‘ಪಾದಚಾರಿ ಮಾರ್ಗಗಳ ಮೇಲಿರುವ ಟ್ರಾನ್ಸ್ಫಾರ್ಮರ್ಗಳನ್ನೆಲ್ಲಾ ತೆರವುಗೊಳಿಸಿದರೆ ಅಂತಿಮವಾಗಿ ಗ್ರಾಹಕರೇ ತೊಂದರೆಗೆ ಒಳಗಾಗುತ್ತಾರೆ’ ಎಂದು ಬೆಸ್ಕಾಂನ ನಗರ ವಿಭಾಗದ ಮುಖ್ಯ ಎಂಜಿನಿಯರ್ ಹೈಕೋರ್ಟ್ಗೆ ತಿಳಿಸಿದ್ದಾರೆ.
ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್ಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಹಾಗೂ ನ್ಯಾಯಮೂರ್ತಿ ಎಸ್.ಸುಜಾತಾ ಅವರಿದ್ದ ವಿಭಾಗೀಯ ಪೀಠಕ್ಕೆ ಮಂಗಳವಾರ ಈ ಕುರಿತ ಪ್ರಮಾಣ ಪತ್ರವನ್ನು ಮುಖ್ಯ ಎಂಜಿನಿಯರ್ ಉದಯಕುಮಾರ್ ಸಲ್ಲಿಸಿದರು.
‘ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಪಾದಚಾರಿ ಮಾರ್ಗಗಳ ಮೇಲಿದ್ದ 18 ಟ್ರಾನ್ಸ್ಫಾರ್ಮರ್ಗಳನ್ನು ತೆರವುಗೊಳಿಸಲಾಗಿದೆ. ಎಲ್ಲೂ ಬೆಸ್ಕಾಂ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮಾಡಿಲ್ಲ. ಆಗಾಗ್ಗೆ ರಸ್ತೆ ವಿಸ್ತರಣೆ ಮಾಡುವುದರಿಂದಲೇ ಟ್ರಾನ್ಸ್ಫಾರ್ಮರ್ಗಳು ಪಾದಚಾರಿ ಮಾರ್ಗಗಳ ಮೇಲೆ ಉಳಿಯುವಂತಾಗಿವೆ. ಬೆಸ್ಕಾಂ ಯಾವುದೇ ಪ್ರದೇಶದಲ್ಲೂ ಖಾಸಗಿಯವರಿಗೆ ಸೇರಿದ ಸ್ವತ್ತಿನಲ್ಲಿ ಟ್ರಾನ್ಸ್ಫಾರ್ಮರ್ಗಳನ್ನು ಅಳವಡಿಸಿಲ್ಲ. ವಿದ್ಯುತ್ ಸರಬರಾಜಿಗೆ ಅಗತ್ಯವಾದ ಎಲ್ಲ ಜವಾಬ್ದಾರಿಗಳನ್ನು ಬೆಸ್ಕಾಂ ಕಾಲಕಾಲಕ್ಕೆ ಸರಿಯಾಗಿ ನಿರ್ವಹಿಸುತ್ತಿದೆ’ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.
ಹೊಸ ವಿನ್ಯಾಸ: ‘ಸ್ಥಳಾಭಾವ ಮತ್ತು ಸುರಕ್ಷತೆ ದೃಷ್ಟಿಯಿಂದ ಟ್ರಾನ್ಸ್ಫಾರ್ಮರ್ಗಳ ಸ್ವರೂಪವನ್ನು ಬದಲಾಯಿಸುವಂತೆ ಬೆಸ್ಕಾಂ ಈಗಾಗಲೇ ರಾಷ್ಟ್ರೀಯ ವಿನ್ಯಾಸ ಸಂಸ್ಥೆಗೆ ಮನವಿ ಮಾಡಿದೆ. ಅಂತೆಯೇ ಖಾಸಗಿ ಸಂಸ್ಥೆಗಳೂ ಈ ದಿಸೆಯಲ್ಲಿ ಯಾವುದಾದರೂ ಹೊಸ ವಿನ್ಯಾಸಗಳ ಆಲೋಚನೆಯನ್ನೇನಾದರೂ ಹೊಂದಿದ್ದರೆ ತಿಳಿಸುವಂತೆ ಕೋರಲಾಗಿದೆ’ ಎಂದು ಪತ್ರದಲ್ಲಿ ವಿವರಿಸಲಾಗಿದೆ. ಮಾದರಿ ರಸ್ತೆಗಳ ಕುರಿತಂತೆಯೂ ಪೀಠವು ಇದೇ ವೇಳೆ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
‘ಮಾದರಿ ರಸ್ತೆಗಾಗಿ ನೀವು ಆಯ್ದುಕೊಂಡಿರುವ ರಸ್ತೆಗಳೆಲ್ಲಾ ಮೊದಲು ಹೇಗಿದ್ದವೋ ಹಾಗೇ ಇವೆ. ಏನೂ ಬದಲಾವಣೆ ಕಾಣುತ್ತಿಲ್ಲ. ಅಷ್ಟಕ್ಕೂ ಈ ರಸ್ತೆಗಳೆಲ್ಲಾ ಈಗಾಗಲೇ ಸುಸ್ಥಿತಿಯಲ್ಲಿವೆ’ ಎಂದು ಪೀಠವು ಕುಟುಕಿತು.
ಮುಂದಿನ ವಿಚಾರಣೆ ವೇಳೆಗೆ ಈ ದಿಸೆಯಲ್ಲಿನ ಪ್ರಗತಿ ವರದಿಯನ್ನು ಸಲ್ಲಿಸಿ ಎಂದು ಬಿಬಿಎಂಪಿಗೆ ಸೂಚಿಸಿ ವಿಚಾರಣೆ ಮುಂದೂಡಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.