ADVERTISEMENT

ರಾಜ್ಯದ ಅಭ್ಯರ್ಥಿಗಳ ನಿರಾಸಕ್ತಿ

ಸಿಬ್ಬಂದಿ ನೇಮಕಾತಿ ಆಯೋಗದ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 19:35 IST
Last Updated 15 ಡಿಸೆಂಬರ್ 2012, 19:35 IST

ಬೆಂಗಳೂರು: `ಸಿಬ್ಬಂದಿ ನೇಮಕಾತಿ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ರಾಜ್ಯದ ಅಭ್ಯರ್ಥಿಗಳು ನಿರಾಸಕ್ತಿ ಹೊಂದಿದ್ದಾರೆ' ಎಂದು ಸಿಬ್ಬಂದಿ ನೇಮಕಾತಿ ಆಯೋಗದ ಅಧ್ಯಕ್ಷ ಎನ್.ಕೆ. ರಘುಪತಿ ವಿಷಾದಿಸಿದರು.

ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ, `ಸಿಬ್ಬಂದಿ ನೇಮಕಾತಿ ಆಯೋಗದ ಪರೀಕ್ಷೆಗಳಿಗೆ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬರುವುದಿಲ್ಲ. ಅರ್ಜಿಗಳು ಬಂದರೂ ನೇಮಕವಾಗುವುದು ತುಂಬ ಕಡಿಮೆ. ಈ ನಿರಾಸಕ್ತಿಗೆ ಕಾರಣ ತಿಳಿಯುತ್ತಿಲ್ಲ' ಎಂದರು.

`ಆಯೋಗವು ಮೇ 12ರಂದು ದೇಶದಾದ್ಯಂತ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲಿದೆ. ಗಡಿ ಭದ್ರತಾ ಪಡೆ, ಕೇಂದ್ರ ಕೈಗಾರಿಕಾ ಭದ್ರತಾ ಪಡೆ, ಕೇಂದ್ರ ಮೀಸಲು ಪೊಲೀಸ್ ಪಡೆ, ಸಶಸ್ತ್ರ ಸೀಮಾ ದಳ ಮತ್ತು ಇಂಡೋ ಟಿಬೆಟಿಯನ್ ಗಡಿ ಪೊಲೀಸ್ ಪಡೆ, ಅಸ್ಸಾಂ ರೈಫಲ್ಸ್‌ನ ರೈಫಲ್‌ಮನ್‌ಗಳ ನೇಮಕಾತಿಗೆ ಈ ಪರೀಕ್ಷೆಗಳು ನಡೆಯಲಿವೆ. ಅಭ್ಯರ್ಥಿಗಳು ಹೆಚ್ಚಿನ ಪರಿಶ್ರಮ ವಹಿಸಿ, ಅಧ್ಯಯನ ಮಾಡಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕು' ಎಂದು ಹೇಳಿದರು.

`ನೇಮಕಾತಿಗೆ ದೇಹದಾರ್ಢ್ಯತೆ (ಪಿಎಸ್‌ಟಿ), ದೈಹಿಕ ದಕ್ಷತೆ ಪರೀಕ್ಷೆಯು (ಪಿಇಟಿ) ಅಗತ್ಯವಾಗಿದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗುವುದು. ಲಿಖಿತ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಅವರಿಗೆ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಲಾಗುವುದು' ಎಂದು ಹೇಳಿದರು.

`ಅಭ್ಯರ್ಥಿಯ ಮೆರಿಟ್ ಮತ್ತು ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ಸಿಎಪಿಎಫ್‌ನ ಯಾವ ವಿಭಾಗಕ್ಕೆ ನಿಯೋಜಿಸಬೇಕು ಎಂಬ ಪ್ರಕ್ರಿಯೆ ನಡೆಯುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಹುದ್ದೆಗಳಿಗೆ ನೇಮಿಸಲಾಗುವುದು' ಎಂದು ಹೇಳಿದರು.

ವಿವರಗಳಿಗಾಗಿ http://ssckkr.kar.nic.in and http://ssc.nic.in ನಲ್ಲಿ ನೋಡಬಹುದು. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು http://ssconline.nic.in or http://ssconline2.gov.in ವೆಬ್‌ಸೈಟ್ ಅನ್ನು ನೋಡಬಹುದು. ಆಯೋಗದ ಸಹಾಯವಾಣಿ ಸಂಖ್ಯೆ : 94838 62020 ಅಥವಾ 2550 2520.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.