ಬೆಂಗಳೂರು: ಮಾಜಿ ಮುಖ್ಯಮಂತ್ರಿಗಳು ಸಹಾಯಧನ ನೀಡುತ್ತಾರೆ ಎಂದು ನಂಬಿಸಿ 40 ವೃದ್ಧೆಯರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬಂಧಿಸಿರುವ ವಿಕ್ಟೋರಿಯಾ ಪೊಲೀಸರು, ರೂ 16 ಲಕ್ಷ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಹೆಸರಘಟ್ಟದ ಮಂಜುನಾಥ (28)ನನ್ನು ಬಂಧಿಸಲಾಗಿದೆ. ಈತನ ವಿರುದ್ಧ ವಂಚನೆ, ಕಳವು ಸೇರಿ ವಿವಿಧ ಠಾಣೆಗಳಲ್ಲಿ 39 ಪ್ರಕರಣಗಳು ದಾಖಲಾಗಿವೆ. ಆರೋಪಿ, ಕಲಾಸಿಪಾಳ್ಯ ಹಾಗೂ ಸಿಟಿ ಮಾರುಕಟ್ಟೆ ಬಸ್ ನಿಲ್ದಾಣಕ್ಕೆ ಬರುವ ವೃದ್ಧೆಯರನ್ನು ಮಾತ್ರ ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದ.
`ನನಗೆ ಕ್ರೈಸ್ತ ಸಂಸ್ಥೆಯೊಂದರ ಪರಿಚಯವಿದೆ. ಆ ಸಂಸ್ಥೆ ಬಡವರಿಗೆರೂ 10 ಸಾವಿರ ಹಣ ಕೊಡುತ್ತದೆ. ಅಲ್ಲದೇ, ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಹಾಗೂ ಶಾಸಕರು ವೃದ್ಧರಿಗೆರೂ 15 ಸಾವಿರ ಸಹಾಯಧನ ನೀಡುತ್ತಾರೆ ಎಂದು ನಂಬಿಸುತ್ತಿದ್ದ. ಆ ಹಣ ಪಡೆಯಲು ವೈದ್ಯಕೀಯ ಪ್ರಮಾಣ ಪತ್ರ ಮತ್ತು ಭಾವಚಿತ್ರ ಕೊಡಬೇಕು' ಎಂದು ನಂಬಿಸುತ್ತಿದ್ದ.
`ಬಳಿಕ ಭಾವಚಿತ್ರ ತೆಗೆಯುವುದಾಗಿ ಅವರನ್ನು ವಿಕ್ಟೋರಿಯಾ ಆವರಣಕ್ಕೆ ಕರೆದೊಯ್ಯುತ್ತಿದ್ದ ಆರೋಪಿ, ಮೈಮೇಲೆ ಒಡವೆಗಳಿದ್ದರೆ ನೆರವು ನೀಡುವವರು ನಿಮ್ಮನ್ನು ಶ್ರೀಮಂತರೆಂದುಕೊಳ್ಳುತ್ತಾರೆ. ಹೀಗಾಗಿ ಆಭರಣ ಕಳಚಿ ಭಾವಚಿತ್ರ ತೆಗೆಸಿಕೊಳ್ಳಿ ಎಂದು ಹೇಳುತ್ತಿದ್ದ. ವೃದ್ಧೆಯರು, ಒಡವೆ ತೆಗೆಯುತ್ತಿದ್ದಂತೆ ಅವುಗಳನ್ನು ಬ್ಯಾಗ್ನಲ್ಲಿಡಲು ನೆರವಾಗುವ ನೆಪದಲ್ಲಿ ದೋಚುತ್ತಿದ್ದ' ಎಂದು ಪೊಲೀಸರು ತಿಳಿಸಿದ್ದಾರೆ. ಅದೇ ರೀತಿ ಆರೋಪಿ, `ನನಗೆ ಆಹಾರ ನಿರೀಕ್ಷಕರ ಪರಿಚಯವಿದ್ದು, ಬಿಪಿಎಲ್ ಕಾರ್ಡ್ ಮಾಡಿಸಿಕೊಡುತ್ತೇನೆ' ಎಂದು ಚಂದ್ರಾಲೇಔಟ್ನಲ್ಲಿ ವೃದ್ಧೆಯೊಬ್ಬರಿಗೆ ವಂಚಿಸಿದ್ದ.
ಬಾಲ್ಯದಲ್ಲಿ ಮಹಿಳೆ ಜತೆ ಸೇರಿ ಕೃತ್ಯ: ಆರೋಪಿಯ ಪೂರ್ವಾಪರಗಳನ್ನು ಪರಿಶೀಲಿಸಿದಾಗ, ಆತ ಬಾಲ್ಯದಿಂದಲೂ ಮಾಲಾ ಎಂಬ ಮಹಿಳೆ ಜತೆ ಸೇರಿಕೊಂಡು ಛತ್ರಗಳಲ್ಲಿ ಕಳವು ಮಾಡುತ್ತಿದ್ದ ಎಂಬುದು ಗೊತ್ತಾಯಿತು. ಮದುವೆ ಸಮಾರಂಭ ನಡೆಯುತ್ತಿರುವ ಛತ್ರಗಳಿಗೆ ವಧು- ವರರ ಸಂಬಂಧಿಕರ ಸೋಗಿನಲ್ಲಿ ನುಗ್ಗುತ್ತಿದ್ದ ಆರೋಪಿಗಳು, ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದರು. ಈತ 39 ವೃದ್ಧೆಯರಿಗೆ ವಂಚಿಸಿರುವುದಾಗಿ ಒಪ್ಪಿಕೊಂಡಿದ್ದಾನೆ. ಈ ಪೈಕಿ 21 ಮಂದಿ ದೂರುದಾರರು ಆರೋಪಿಯನ್ನು ಗುರುತಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
ಸಿಕ್ಕಿಬಿದ್ದದ್ದು ಹೀಗೆ
ಇತ್ತೀಚೆಗೆ ಕಲಾಸಿಪಾಳ್ಯ ಬಸ್ ನಿಲ್ದಾಣದಲ್ಲಿ ಬಸ್ಗಾಗಿ ಕಾಯುತ್ತಿದ್ದ ಕೆಂಪಮ್ಮ ಎಂಬುವರಿಗೆ ಆರೋಪಿ ಇದೇ ರೀತಿ ವಂಚಿಸಿದ್ದ. ಪಿಂಚಣಿ ಹಣ ಕೊಡಿಸುವ ನೆಪದಲ್ಲಿ ವೃದ್ಧೆಯನ್ನು ಮೇಲಿನ ರೀತಿಯಲ್ಲೇ ವಿಕ್ಟೋರಿಯಾ ಆಸ್ಪತ್ರೆ ಆವರಣಕ್ಕೆ ಕರೆದೊಯ್ದ ವಂಚಿಸಿದ್ದ. ಈ ಸಂಬಂಧ ಕೆಂಪಮ್ಮ ನೀಡಿದ್ದ ದೂರನ್ನು ಆಧರಿಸಿ ತನಿಖೆ ಆರಂಭಿಸಲಾಯಿತು.
ಇದೇ ರೀತಿಯ ಕೃತ್ಯವನ್ನು ಹೋಲುವ ಏಳು ಪ್ರಕರಣಗಳು ವಿಕ್ಟೋರಿಯಾ ಆಸ್ಪತ್ರೆ ಠಾಣೆಯಲ್ಲಿ ದಾಖಲಾಗಿದ್ದವು. ಹೀಗಾಗಿ, ಆರೋಪಿಯನ್ನು ಪತ್ತೆ ಮಾಡಲು ಸಿಬ್ಬಂದಿಯ ತಂಡವನ್ನು ರಚಿಸಿ ಆಸ್ಪತ್ರೆಗೆ ಬಂದು ಹೋಗುವ ರೋಗಿಗಳು, ಸಾರ್ವಜನಿಕರು ಮತ್ತು ವೃದ್ಧೆಯರನ್ನು ಕರೆತರುವ ಅಪರಿಚಿತ ವ್ಯಕ್ತಿಗಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿತ್ತು.
ವಾಣಿ ವಿಲಾಸ ಆಸ್ಪತ್ರೆ ಬಳಿ ಜೂನ್ 14ರಂದು ಅಪರಿಚಿತ ವ್ಯಕ್ತಿಯೊಬ್ಬ ಮರಿಯಮ್ಮ ಎಂಬ ವೃದ್ಧೆ ಜತೆ ಪ್ರತ್ಯೇಕ ಮಾತುಕತೆ ನಡೆಸುತ್ತಿದ್ದ. ಆಗ ಸ್ಥಳದಲ್ಲಿದ್ದ ಎಎಸ್ಐ ರುದ್ರ ಮತ್ತು ಕಾನ್ಸ್ಟೆಬಲ್ ಮಂಜುನಾಥ್, ಆ ವ್ಯಕ್ತಿಯ ಬಳಿ ಹೋಗುತ್ತಿದ್ದಂತೆ ಆತ ಓಡಾಲಾರಂಭಿಸಿದ. ಆತನನ್ನು ಬೆನ್ನಟ್ಟಿ ಹಿಡಿದ ಸಿಬ್ಬಂದಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.