ADVERTISEMENT

ರೂ. 25 ಲಕ್ಷ ಮೌಲ್ಯದ ಮರದ ತುಂಡು ವಶ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 20:26 IST
Last Updated 10 ಏಪ್ರಿಲ್ 2013, 20:26 IST

ಬೆಂಗಳೂರು: ರಕ್ತಚಂದನ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಆರೋಪದ ಮೇಲೆ ತಮಿಳುನಾಡು ಮೂಲದ ರಘು (35) ಮತ್ತು ವೆಂಕಟೇಶ್ (34) ಎಂಬುವರನ್ನು ಬಂಧಿಸಿರುವ ಎಚ್‌ಎಸ್‌ಆರ್ ಲೇಔಟ್ ಪೊಲೀಸರು ಸುಮಾರುರೂ. 25 ಲಕ್ಷ ಮೌಲ್ಯದ ರಕ್ತಚಂದನ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳು ಆಂಧ್ರಪ್ರದೇಶದಿಂದ ಮುಂಬೈಗೆ ಲಾರಿಯಲ್ಲಿ ರಕ್ತಚಂದನ ಮರದ ತುಂಡುಗಳನ್ನು ಸಾಗಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಸರ್ಜಾಪುರ ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ಲಾರಿಯನ್ನು ತಡೆದು ಆರೋಪಿಗಳನ್ನು ಬಂಧಿಸಲಾಯಿತು. ಅವರು ಎಲೆಕೋಸಿನ ಚೀಲಗಳ ಕೆಳಗೆ ರಕ್ತಚಂದನ ಮರದ ತುಂಡುಗಳನ್ನು ಇಟ್ಟು ಸಾಗಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆಂಧ್ರಪ್ರದೇಶದ ಅರಣ್ಯ ಪ್ರದೇಶದಲ್ಲಿ ರಕ್ತಚಂದನ ಮರಗಳನ್ನು ಕಡಿದುಕೊಂಡು ಬಂದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿದ್ದಾರೆ. ಅವರಿಂದ ಮೂರು ಟನ್ ರಕ್ತಚಂದನ ಮರದ ತುಂಡುಗಳು ಹಾಗೂ ಲಾರಿಯನ್ನು ಜಪ್ತಿ ಮಾಡಲಾಗಿದೆ. ಬಂಧಿತರ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಡಿವಾಳ ಉಪ ವಿಭಾಗದ ಎಸಿಪಿ ಸುಬ್ಬಣ್ಣ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಎನ್.ಟಿ.ಶ್ರೀನಿವಾಸರೆಡ್ಡಿ, ಎಸ್‌ಐ ಎನ್.ಟಿ.ಲಕ್ಷ್ಮಣಗೌಡ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸರಗಳವು: ವಿವೇಕನಗರ ಐದನೇ ಮುಖ್ಯರಸ್ತೆಯಲ್ಲಿ ದುಷ್ಕರ್ಮಿಗಳು ಮಂಗಳವಾರ ಸಂಜೆ ಕಮಲಾ ಎಂಬುವರ ಚಿನ್ನದ ಸರವನ್ನು ದೋಚಿದ್ದಾರೆ.

ವಿವೇಕನಗರ ಎಂಟನೇ ಅಡ್ಡರಸ್ತೆ ನಿವಾಸಿಯಾದ ಕಮಲಾ ಅವರು ಬ್ಯಾಂಕ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಕೆಲಸ ಮುಗಿದ ನಂತರ ಬ್ಯಾಂಕ್‌ನಿಂದ ಆಟೊದಲ್ಲಿ ವಿವೇಕನಗರ ಐದನೇ ಮುಖ್ಯರಸ್ತೆಗೆ ಬಂದಿಳಿದ ಅವರು ಮನೆಗೆ ನಡೆದು ಹೋಗುತ್ತಿದ್ದಾಗ ದುಷ್ಕರ್ಮಿಗಳಿಬ್ಬರು ಬೈಕ್‌ನಲ್ಲಿ ಹಿಂಬಾಲಿಸಿ ಬಂದು ಈ ಕೃತ್ಯ ಎಸಗಿದ್ದಾರೆ. ಸರದ ಮೌಲ್ಯ ರೂ. 1.20 ಲಕ್ಷ ಎಂದು ವಿವೇಕನಗರ ಪೊಲೀಸರು ತಿಳಿಸಿದ್ದಾರೆ. ದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.