ADVERTISEMENT

ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST
ಯಲಹಂಕ ಸಮೀಪದ ಅಲ್ಲಾಳಸಂದ್ರದ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಚಾಲನೆ ನೀಡಿದರು. ಬಿಬಿಎಂಪಿ ಸದಸ್ಯ ಮುನಿರಾಜು ಚಿತ್ರದಲ್ಲಿದ್ದಾರೆ
ಯಲಹಂಕ ಸಮೀಪದ ಅಲ್ಲಾಳಸಂದ್ರದ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್‌.ಆರ್‌.ವಿಶ್ವನಾಥ್‌ ಚಾಲನೆ ನೀಡಿದರು. ಬಿಬಿಎಂಪಿ ಸದಸ್ಯ ಮುನಿರಾಜು ಚಿತ್ರದಲ್ಲಿದ್ದಾರೆ   

ಯಲಹಂಕ: ಬಿಬಿಎಂಪಿ ಮತ್ತು ರೈಲ್ವೆ ಇಲಾಖೆ ಜಂಟಿಯಾಗಿ ರೂ 30 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಂಡಿರುವ ಅಲ್ಲಾ­ಳಸಂದ್ರ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್‌.ಆರ್‌.­ವಿಶ್ವನಾಥ್‌ ಗುದ್ದಲಿಪೂಜೆ ನೆರವೇ­ರಿಸಿದರು.

ನಂತರ ಮಾತನಾಡಿದ ಅವರು, ಬಹುದಿನಗಳಿಂದ ನನೆಗುದಿಗೆ ಬಿದ್ದಿದ್ದ  ಅಲ್ಲಾಳಸಂದ್ರ ರೈಲ್ವೆ ಮೇಲ್ಸೇತುವೆ ಕಾಮಗಾರಿಯನ್ನು ಬಿಬಿಎಂಪಿಯಿಂದ ರೂ 18 ಕೋಟಿ ಹಾಗೂ ರೈಲ್ವೆ ಇಲಾಖೆ­ಯಿಂದ ರೂ 12 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದ್ದು, ಒಂದು ವರ್ಷ­ದಲ್ಲಿ ಪೂರ್ಣಗೊ­ಳಿಸಲಾಗುವುದು ಎಂದು ಹೇಳಿದರು.

ಈ ರಸ್ತೆಯು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದ್ದು, ಇಲ್ಲಿ ರೈಲು ಓಡಾಟ ಹೆಚ್ಚಿರುವ ಕಾರಣ  ರೈಲ್ವೆಗೇಟ್‌ ಹಾಕಿದಾಗ ವಾಹನ ಸವಾರರು ಸರಿ­ಯಾದ ಸಮಯಕ್ಕೆ ತಮ್ಮ ಪ್ರದೇಶಗಳಿಗೆ ತಲುಪಲು ಸಾಧ್ಯವಾಗದೆ ತೊಂದರೆ ಅನುಭವಿಸುತ್ತಿದ್ದಾರೆ. ಮೇಲ್ಸೇತುವೆ ನಿರ್ಮಿಸುವುದರಿಂದ ದೊಡ್ಡಬಳ್ಳಾಪುರ ಹಾಗೂ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಹನ ಸವಾ­ರರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ತಿಳಿಸಿದರು.

ಬಿಬಿಎಂಪಿ ಸದಸ್ಯ ಮುನಿರಾಜು, ನೈರುತ್ಯರೈಲ್ವೆ ವಲಯದ ಉಪ ಮುಖ್ಯ ಎಂಜಿನಿಯರ್‌ ವಿ.ಹರಿಬಾಬು, ಕಾರ್ಯ­ಪಾಲಕ ಎಂಜಿನಿಯರ್‌ ಸೆಲ್ವಂ, ಬಿಜೆಪಿ ಮುಖಂಡರಾದ ರಮೇಶ್‌, ಸತೀಶ್‌, ಸೋಮಶೇಖರ್‌ ಮೊದ­ಲಾದವರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.