ADVERTISEMENT

ಲಂಚ ಕೇಳುವ ಪೊಲೀಸರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ: ಜಾರ್ಜ್‌

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:34 IST
Last Updated 17 ಡಿಸೆಂಬರ್ 2013, 19:34 IST

ಬೆಂಗಳೂರು: ಲಂಚ ಕೇಳುವ ಪೊಲೀ ಸರ ವಿರುದ್ಧ ನಾಗರಿಕರು ನೇರವಾಗಿ ತಮಗೆ ದೂರು ನೀಡಬಹುದು. ಅಂಥ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ಹೇಳಿದರು.

ನಗರದ ಬಸವನಗುಡಿ ಠಾಣೆ ಆವರಣದಲ್ಲಿ ನೂತನವಾಗಿ ನಿರ್ಮಿಸ ಲಾಗಿರುವ ಹಿರಿಯ ನಾಗರಿಕರ, ಮಹಿಳೆಯರ, ಮಕ್ಕಳ ಸಹಾಯವಾಣಿ ಹಾಗೂ ಸಂಚಾರ ಗಣಕೀಕೃತ ಕೇಂದ್ರ ಗಳ ‘ಸ್ಪಂದನ’ ಸಂಕೀರ್ಣವನ್ನು ಮಂಗಳವಾರ ಉದ್ಘಾಟಿಸಿ ಮಾತ ನಾಡಿ, ‘ಪೊಲೀಸ್‌ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳಿದ್ದಾರೆ. ಆದರೆ, ಕೆಲವರು ಮಾಡುವ ಕರ್ತವ್ಯಲೋಪದಿಂದ ಇಡೀ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ. ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರದಿಂದ ಎಂದಿಗೂ ರಕ್ಷಣೆ ಸಿಗುವುದಿಲ್ಲ. ಲಂಚ ಕೇಳುವ ಸಿಬ್ಬಂದಿ ವಿರುದ್ಧ ಸಾರ್ವ ಜನಿಕರು ಮುಕ್ತವಾಗಿ ದೂರು ನೀಡಬಹುದು. ದೂರುದಾರರ ಹೆಸರನ್ನು ಗೌಪ್ಯವಾಗಿಟ್ಟು ಭ್ರಷ್ಟರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಸರ್ಕಾರ ರಚನೆಯಾದ ಬಳಿಕ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಪೊಲೀಸ್‌ ಅಧಿಕಾರಿಗಳ ಮೊದಲ ಸಭೆಯಲ್ಲಿ ಭ್ರಷ್ಟಚಾರದ ವಿರುದ್ಧ ಕ್ರಮ ಜರುಗಿಸುವ ಬಗ್ಗೆ ಎಚ್ಚರಿಕೆ ಕೊಡಲಾಗಿತ್ತು. ಆದರೂ, ಜಾಗ್ರತರಾಗದ ಕೆಲ ಸಿಬ್ಬಂದಿ ನಾಗರಿಕರಿಂದ ಲಂಚ ಪಡೆಯುತ್ತಿದ್ದಾರೆ. ಮಾಧ್ಯಮಗಳಲ್ಲಿ ಲೋಕಾ ಯುಕ್ತ ದಾಳಿಯ ಕುರಿತು ಪ್ರಕಟವಾಗುವ ಸುದ್ದಿಗಳನ್ನು ಓದಿದಾಗ ಇಲಾಖೆಯ ಬಗ್ಗೆ ಬೇಸರವಾಗುತ್ತದೆ’ ಎಂದು ರೂ10 ಸಾವಿರ ಲಂಚ ಪಡೆಯುವಾಗ ಸಿಕ್ಕಿ ಬಿದ್ದ ಹಲಸೂರು ಗೇಟ್‌ ಇನ್‌ ಸ್ಪೆಕ್ಟರ್‌ ಸಿ.ವಿ.ದೀಪಕ್‌ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ವಿಷಾದ ವ್ಯಕ್ತಪಡಿಸಿದರು.

‘ಸರ್ಕಾರ ಸೂಚಿಸಿದ ಮಾರ್ಗ ಸೂಚಿಗಳನ್ನು ಕಡ್ಡಾಯವಾಗಿ ಪಾಲಿ ಸುವ ಕ್ಲಬ್‌ಗಳ ಮಾಲೀಕರು ಯಾರಿ ಗೂ ಹೆದರಬೇಕಿಲ್ಲ, ನನ್ನನ್ನೂ ಸೇರಿ ದಂತೆ ಸರ್ಕಾರದ ಯಾರೊಬ್ಬರಿಗೂ ಹಫ್ತಾ ಕೊಡಬೇಕಾದ ಅಗತ್ಯವಿಲ್ಲ. ಅಂತಹ ಕೀಳು ಮಟ್ಟದ ರಾಜಕೀಯ ನಡೆಸುವ ಅನಿವಾರ್ಯತೆಯೂ ನಮಗಿಲ್ಲ’ ಎಂದು ಅವರು ಹೇಳಿದರು.

ಕೆಲವರು ರಾಜಕಾರಣಿಗಳ ಹೆಸರು ಹೇಳಿಕೊಂಡು ಕ್ಲಬ್‌ಗಳ ಮಾಲೀಕರಿಂದ ಲಂಚ ಬೇಡುತ್ತಿದ್ದಾರೆ. ಇದು ನಾಗರಿಕರ ಗಮನದಲ್ಲಿರಬೇಕು. ಪೊಲೀಸರು ಇನ್ನಾ­ದರೂ ವೃತ್ತಿಗೆ ಗೌರವ ಕೊಟ್ಟು ಕೆಲಸ ಮಾಡಬೇಕು’ ಎಂದು ಜಾರ್ಜ್‌ ಚಾಟಿ ಬೀಸಿದರು.

ತನಿಖೆ ಪೂರ್ಣಗೊಳ್ಳದೆ ವರ್ಗಾವಣೆ ಇಲ್ಲ: ‘ಗಂಭೀರ ಸ್ವರೂಪದ ಅಪರಾಧ ಪ್ರಕರಣಗಳ ತನಿಖೆ ನಡೆಸುತ್ತಿರುವ ಪೊಲೀಸರನ್ನು, ತನಿಖೆ ಪೂರ್ಣ­ಗೊಳಿ­ಸುವವರೆಗೂ ವರ್ಗಾ­ವಣೆ ಮಾಡ­ಬಾರದು ಎಂದು ನಿರ್ಧರಿಸಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ಹಿರಿಯ ಪೊಲೀಸ್‌ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದು ಗೃಹ ಸಚಿವ ಕೆ.ಜೆ.ಜಾರ್ಜ್‌ ‘ಪ್ರಜಾವಾಣಿ’ ಗೆ ತಿಳಿಸಿದರು.

ವರ್ಗಾವಣೆ ಬಯಸದ ಕೆಲ ಅಧಿಕಾ­ರಿಗಳಿಗೆ ಈ ನಿರ್ಣಯ ಸಂತಸ ತರಬ­ಹುದು. ಆದರೆ, ಸಕಾಲಕ್ಕೆ ತನಿಖೆ ಪೂರ್ಣ­ಗೊಳ್ಳದಿದ್ದರೂ ತನಿಖಾಧಿಕಾರಿಗಳು ಅದಕ್ಕಿಂತ ಹೆಚ್ಚಿನ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಲೋಕಾಯುಕ್ತ ಪೊಲೀ­ಸರನ್ನು ವರ್ಗಾವಣೆ ಮಾಡು­ವಾಗ ಹಿರಿಯ ಅಧಿಕಾರಿಗಳಿಂದ ನಿರಾಕ್ಷೇ­ಪಣಾ ಪತ್ರ (ಎನ್‌ಒಸಿ) ಪಡೆಯಲಾ­ಗುತ್ತಿದೆ. ಅದೇ ಮಾದರಿಯಲ್ಲಿ ಅಪ­ರಾಧ ವಿಭಾಗದ ಪೊಲೀಸರನ್ನು ವರ್ಗಾ­ವಣೆ ಮಾಡುವಾಗಲೂ ಹಿರಿಯ ಅಧಿ­ಕಾರಿಗಳಿಂದ ಎನ್‌ಒಸಿ ಪಡೆಯುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT