ಮಹದೇವಪುರ: ಸುಮಾರು 1.7 ಕೋಟಿ ರೂಪಾಯಿಗಳ ಅನುದಾನದಲ್ಲಿ ವರ್ತೂರು ವಾರ್ಡ್ ವ್ಯಾಪ್ತಿಯ ವಿವಿಧ ಮುಖ್ಯ ರಸ್ತೆಗಳ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಸದಸ್ಯ ಎಸ್.ಉದಯಕುಮಾರ್ ತಿಳಿಸಿದ್ದಾರೆ.
ವರ್ತೂರು ಗ್ರಾಮದಲ್ಲಿ ಇತ್ತೀಚೆಗೆ ಸೊರಹುಣಸೆ ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಆರು ಅಡ್ಡ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ವಾರ್ಡ್ನಲ್ಲಿ ಈಗಾಗಲೇ ಶೇ. 50ರಷ್ಟು ರಸ್ತೆ ಕಾಮಗಾರಿಗಳು ಮುಕ್ತಾಯಗೊಂಡಿವೆ. ಸದ್ಯ ಅಡ್ಡ ರಸ್ತೆಗಳ ದುರಸ್ತಿ ಹಾಗೂ ಅಗಲೀಕರಣ ಕಾಮಗಾರಿಯನ್ನು ಆರಂಭಿಸಲಾಗಿದೆ ಎಂದು ಅವರು ಹೇಳಿದರು.
ಅಡ್ಡ ರಸ್ತೆಗಳ ದುರಸ್ತಿ ಕಾರ್ಯದಿಂದಾಗಿ ಕೆಲ ದಿನಗಳ ಮಟ್ಟಿಗೆ ವಾಹನಗಳ ಓಡಾಟಕ್ಕೆ ತೊಂದರೆಯಾಗಬಹುದ. ಅದಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ವಿನಂತಿಸಿ ಕೊಂಡರು.
ಅಲ್ಲದೆ, ಗುತ್ತಿಗೆದಾರರು ಆದಷ್ಟು ಬೇಗ ಕಾಮಗಾರಿ ಮುಕ್ತಾಯಗೊಳಿಸಬೇಕು. ಒಂದು ವೇಳೆ ಕಾಮಗಾರಿ ವಿಳಂಬವಾದಲ್ಲಿ ಗುತ್ತಿಗೆ ರದ್ದುಗೊಳಿಸಲಾಗುವುದು ಹಾಗೂ ಆಯುಕ್ತರಿಗೆ ದೂರು ನೀಡಲಾಗುವುದು ಎಂದು ಎಚ್ಚರಿಸಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣಪ್ಪ, ಮಾಜಿ ಸದಸ್ಯ ವಿ.ಟಿ.ಬಿ.ಬಾಬುರೆಡ್ಡಿ, ವರ್ತೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ವಿ.ಸತೀಶ, ವೆಂಕಟಸ್ವಾಮಿರೆಡ್ಡಿ, ರೆಡ್ಡಿ ಜನ ಸಂಘದ ನಿರ್ದೇಶಕರಾದ ಮುತ್ಸಂದ್ರ ಕೃಷ್ಣಾರೆಡ್ಡಿ, ಲಕ್ಷ್ಮಣರೆಡ್ಡಿ, ಬಾಬಿ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.