ADVERTISEMENT

ವಾರಾಂತ್ಯ ಉಚಿತ ಬೋಧನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ಬೆಂಗಳೂರು `ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡುತ್ತಿರುವ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಉತ್ಕೃಷ್ಟವಾದ ಶಿಕ್ಷಣವನ್ನು ನೀಡುವುದಕ್ಕಾಗಿ ಜಯನಗರ ಅಕಾಡೆಮಿಕ್ ಸಮಿತಿಯನ್ನು ಸ್ಥಾಪಿಸಲಾಗಿದೆ' ಎಂದು ಶಾಸಕ ಬಿ.ಎನ್.ವಿಜಯಕುಮಾರ್ ತಿಳಿಸಿದರು.

ಭಾನುವಾರ ಯೂತ್ ಫಾರ್ ಸೊಸೈಟಿ ಮತ್ತು ಜಯನಗರ ಅಕಾಡೆಮಿ ಕಮಿಟಿ ಜಂಟಿಯಾಗಿ ರಾಗೀಗುಡ್ಡ ದೇವಸ್ಥಾನ ಸಮೀಪ ಇರುವ ಆರ್‌ಎಸ್‌ಪಿಎ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ವಾರಾಂತ್ಯದ ಉಚಿತ ಪಾಠ ಬೋಧಿಸುವ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
`ಯೋಜನೆಯನ್ನು ಕಳೆದ ಎರಡು ವರ್ಷಗಳ ಹಿಂದೆ ಆಂಭಿಸಲಾಗಿದೆ. ನಾಡಿಗೆ ಉತ್ತಮ ಯುವಕರನ್ನು ನೀಡಬೇಕಾದರೆ ಉತ್ತಮ ಶಿಕ್ಷಣವನ್ನು ನೀಡುವುದು ಬಹಳ ಮುಖ್ಯ. ಹಾಗಾಗಿ ಹಿಂದುಳಿದ ಮಕ್ಕಳಿಗೆ ಉಚಿತ ತರಬೇತಿ ನೀಡಲಾಗುತ್ತಿದೆ' ಎಂದರು.

`ಬಿಬಿಎಂಪಿ ವ್ಯಾಪಿಯಲ್ಲಿ ಅಧ್ಯಯನ ಮಾಡುತ್ತಿರುವ 8, 9ನೇ ತರಗತಿಯ ಮಕ್ಕಳಿಗೆ ತರಬೇತಿ ನೀಡಲಾಗುತ್ತಿದ್ದು, ನಗರ ಅತಿ ಪ್ರತಿಷ್ಠಿತ ವಿಷಯಗಳ ತಜ್ಞ 50 ರಿಂದ 60 ಜನ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರತಿ ಶನಿವಾರ ಹಾಗೂ ಭಾನುವಾರ ತರಬೇತಿಯನ್ನು ನೀಡುವರು. ಪ್ರತಿ ದಿನ 100 ರಿಂದ 200 ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ' ಎಂದು ಹೇಳಿದರು.

ಯೂತ್ ಫಾರ್ ಸೊಸೈಟಿ ಸದಸ್ಯೆ ಧರಣಿ ಮಾತನಾಡಿ, `ಉತ್ತಮವಾದ ಶಿಕ್ಷಣ ಪಡೆಯಲು ಇಂದಿನ ದಿನಮಾನದಲ್ಲಿ ಬಡವರಿಂದ ಆಗುವುದಲ್ಲ. ಉತ್ತಮ ಶಿಕ್ಷಣವನ್ನು ಪಡೆದವರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ. ಬಡ ಮಕ್ಕಳಿಗೆ ನಾವು ವಾರಾಂತ್ಯಗಳಲ್ಲಿ ತರಬೇತಿಯನ್ನು ನೀಡುತ್ತಿದ್ದೇವೆ. ಮುಂಬರುವ ದಿನಗಳಲ್ಲಿ ಕೊಳಚೆ ಪ್ರದೇಶದ ಮಕ್ಕಳಿಗೆ ತರಬೇತಿ ನೀಡಲು ಯೋಜನೆಯನ್ನು ಹಾಕಿಕೊಳ್ಳಲಾಗಿದೆ `ಎಂದು ತಿಳಿಸಿದರು.

ಸಮಾರಂಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕರಾದ ಪಿ.ಎ.ಕುಮಾರ್, ವಿಜಯ ಐಟಿ ಅಕಾಡೆಮಿಯ ಡೀನ್ ಕೆ.ಶೇಷಮೂರ್ತಿ, ಯೂತ್ ಸೊಸೈಟಿ ಸಂಸ್ಥೆಯ ಅಧ್ಯಕ್ಷ ವಿನಯ ಗರುಡ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.