ಬೆಂಗಳೂರು: ‘ಮಠದಲ್ಲಿ ಅವ್ಯವಹಾರ ನಡೆಯುತ್ತಿರುವ ಆರೋಪಗಳಿದ್ದು, ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳನ್ನು ಪೀಠದಿಂದ ಕೆಳಗಿಳಿಸಬೇಕು’ ಎಂದು ಕೋರಿ ಎದುರ್ಕುಳ ಈಶ್ವರ ಭಟ್ ಸೇರಿದಂತೆ ಆರು ಜನರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯಿಂದ ಹಂಗಾಮಿ ಮಖ್ಯ ನ್ಯಾಯಮೂರ್ತಿಎಚ್.ಜಿ.ರಮೇಶ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಹಿಂದೆ ಸರಿದಿದೆ.
ಬುಧವಾರ ಪ್ರಕರಣ ವಿಚಾರಣೆಗೆ ಬರುತ್ತಿದ್ದಂತೆ ರಮೇಶ್, ‘ಈ ಅರ್ಜಿ ಬೇರೊಂದು ನ್ಯಾಯಪೀಠಕ್ಕೆ ವರ್ಗಾವಣೆ ಆಗಲಿ’ ಎಂಬ ಅಭಿಪ್ರಾಯದೊಂದಿಗೆ ಹಿಂದೆ ಸರಿದರು.
ಈ ಮೊದಲು ರಾಮಚಂದ್ರಾಪುರ ಮಠದ ವಿರುದ್ಧದ ಪ್ರಕರಣ ಎಚ್.ಜಿ.ರಮೇಶ್ ಅವರಿದ್ದ ನ್ಯಾಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಇದರಲ್ಲಿ ಹಿರಿಯ ವಕೀಲ ವಕೀಲ ಬಿ.ವಿ.ಆಚಾರ್ಯ ಮಠದ ಪರವಾಗಿ ಹಾಜರಾಗಿದ್ದರು. ಆಗ ರಮೇಶ್, ‘ನಾನು ಆಚಾರ್ಯ ಅವರ ಬಳಿ ಕಿರಿಯ ವಕೀಲನಾಗಿ ಕೆಲಸ ಮಾಡಿದ್ದೇನೆ. ಆದ ಕಾರಣ ಈ ಪ್ರಕರಣದ ವಿಚಾರಣೆ ನಡೆಸುವುದಿಲ್ಲ’ ಎಂಬ ಅಭಿಪ್ರಾಯದೊಂದಿಗೆ ಹಿಂದೆ ಸರಿದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.