ADVERTISEMENT

ವಿಜ್ಞಾನ ಸಂಶೋಧನೆಗೆ ಹೂಡಿಕೆ: ಸಲಹೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2012, 19:30 IST
Last Updated 5 ಏಪ್ರಿಲ್ 2012, 19:30 IST

ಬೆಂಗಳೂರು: `ಅಭಿವೃದ್ಧಿಶೀಲ ರಾಷ್ಟ್ರಗಳ ಜತೆಗೆ ಪೈಪೋಟಿಗೆ ಭಾರತದಲ್ಲಿ ವಿಜ್ಞಾನ ಸಂಶೋಧನಾ ಚಟುವಟಿಕೆಗಳಿಗೆ ಇನ್ನಷ್ಟು ಒತ್ತು ನೀಡಿ ದೊಡ್ಡ ಪ್ರಮಾಣದ ಹೂಡಿಕೆ ಮಾಡಬೇಕು~ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ. ಕುರ್ಟ್ ವುಟ್ರಿಚ್ ಸಲಹೆ ನೀಡಿದರು.

ಇಲ್ಲಿನ ಬೊಮ್ಮಸಂದ್ರ ಕೈಗಾರಿಕಾ ಕೇಂದ್ರದಲ್ಲಿ ಬಯೋಕಾನ್ ಸಂಶೋಧನಾ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡುತ್ತಾ, `ದೇಶದಲ್ಲಿ ಪ್ರತಿಭಾವಂತ ವಿಜ್ಞಾನಿಗಳಿದ್ದಾರೆ. ಪ್ರೋತ್ಸಾಹದ ಕೊರತೆಯಿಂದಾಗಿ ಪ್ರತಿಭಾ ಪಲಾಯನ ಆಗುತ್ತಿದೆ. ವಿಜ್ಞಾನಿಗಳಿಗೆ ಸರ್ಕಾರ ಪ್ರೋತ್ಸಾಹ- ಬೆಂಬಲ ನೀಡಿ ಇಂತಹ ಪ್ರವೃತ್ತಿಗೆ ತಡೆಯಬೇಕು. ಜತೆಗೆ ಭಾರತ ಸರ್ಕಾರ ವಿಜ್ಞಾನ- ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು~ ಎಂದು ಅವರು ಸಲಹೆ ನೀಡಿದರು.

`ಗೊರಕೆ ಸಮಸ್ಯೆಯಿಂದ ಬಳಲುತ್ತಿರುವವರು 10 ದಶಲಕ್ಷಕ್ಕೂ ಅಧಿಕ ಮಂದಿ ಇದ್ದಾರೆ. ನಿರ್ಜಲೀಕರಣದಿಂದ ಸಾಯುವ ಮಕ್ಕಳ ಸಂಖ್ಯೆಯೂ ದೊಡ್ಡದಿದೆ. ಇಂತಹ ಸಮಸ್ಯೆಗಳ ನಿವಾರಣೆಗೆ ವೈದ್ಯಕೀಯ ಬೆಂಬಲ ದೊರಕಬೇಕು. ಇಂತಹ ಸಮಸ್ಯೆಗಳ ಪರಿಹಾರಕ್ಕೆ ವಿಜ್ಞಾನಿಗಳು ನವ ವಿಚಾರಗಳ ಶೋಧ ಕಾರ್ಯಕ್ಕೆ ಮುಂದಾಗಬೇಕು~ ಎಂದು ಅವರು ತಿಳಿಸಿದರು.

`ಬಯೋಕಾನ್ ಸಂಶೋಧನಾ ಕೇಂದ್ರದ ಸಾಮರ್ಥ್ಯ ಅಂತರರಾಷ್ಟ್ರೀಯ ಗುಣಮಟ್ಟದಿಂದ ಕೂಡಿದೆ. ಇಲ್ಲಿ ಪ್ರತಿಭಾವಂತ ವಿಜ್ಞಾನಿಗಳ ದೊಡ್ಡ ದಂಡೇ ಇದೆ. ಈ ಕೇಂದ್ರದ ಮೂಲಕ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಶೋಧಗಳು ನಡೆಯಲಿ~ ಎಂದು ಅವರು ಶುಭ ಹಾರೈಸಿದರು.

ಬಯೋಕಾನ್ ಸಂಸ್ಥೆಯ ಆಡಳಿತ ನಿರ್ದೇಶಕಿ ಕಿರಣ್ ಮಜುಂದಾರ್ ಮಾತನಾಡಿ, `ಇಲ್ಲಿನ ಸಂಶೋಧನಾ ಕೇಂದ್ರಕ್ಕೆ ರೂ 250 ಕೋಟಿ ಹೂಡಿಕೆ ಮಾಡಲಾಗಿದೆ. 300ಕ್ಕೂ ಅಧಿಕ ವಿಜ್ಞಾನಿಗಳ ತಂಡ ಈ ಕೇಂದ್ರದಲ್ಲಿ ಕಾರ್ಯನಿರ್ವಹಿಸಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಜ್ಞಾನಿಗಳ ನೇಮಕ ಮಾಡಿಕೊಳ್ಳಲಾಗುವುದು~ ಎಂದರು. 

ಜೆಎನ್‌ಸಿಎಆರ್ ಅಧ್ಯಕ್ಷ ಪ್ರೊ.ಸಿ.ಎನ್.ಆರ್.ರಾವ್, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಪಿ.ಬಲರಾಮ್, ನ್ಯಾಷನಲ್ ಸೆಂಟರ್ ಫಾರ್ ಬಯೋಲಾಜಿಕಲ್ ಸೈನ್ಸಸ್ ನಿರ್ದೇಶಕ ಪ್ರೊ.ಕೆ. ವಿಜಯರಾಘವನ್, ಬಯೋಕಾನ್ ಸಂಶೋಧನೆ ಹಾಗೂ ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಡಾ. ಅಭಿಜಿತ್ ಬಾರ್ವೆ ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.