ಬೆಂಗಳೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಕಾಡೆಮಿಕ್ ಸೆನೆಟ್ಗೆ 15 ಜನ ಸದಸ್ಯರನ್ನು ನೇಮಕ ಮಾಡಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಆದೇಶ ಹೊರಡಿಸಿದ್ದಾರೆ.
ಡಾ.ಎಚ್.ಸಿ.ನಾಗರಾಜ್, ಡಾ.ಕೆ.ಸುಕುಮಾರನ್, ಡಾ.ಎ.ಎಸ್.ದೇಶಪಾಂಡೆ, ಡಾ.ವಿ.ಶ್ರೀಧರ್, ಡಾ.ಉಮೇಶ್ ಎಂ.ಭೂಶಿ, ಡಾ.ಎಸ್.ಎಸ್.ಹೆಬ್ಬಾಳ್, ಡಾ.ಕೆ.ಎಸ್.ಅನಂತ ಕೃಷ್ಣನ್, ಡಾ.ಮೊಹಮದ್ ಹನೀಫ್, ಡಾ.ಬಿ.ಸದಾಶಿವಗೌಡ, ಡಾ.ಸಿ.ಕೆ.ಸುಬ್ರಾಯ. ಇ.ಎಸ್.ದ್ವಾರಕಾದಾಸ, ಎಲ್.ಎಸ್.ಸತ್ಯಮೂರ್ತಿ, ಡಾ.ಎಸ್.ಬಸವರಾಜಪ್ಪ, ಎಸ್.ವಿ.ಪ್ರಮೋದ್, ಡಾ.ಅಣ್ಣಮ್ಮ ಅಬ್ರಹಾಂ.
ಸೆನೆಟ್ಗೆ ನೇಮಕ ಸಂಬಂಧ ವಿ.ವಿ.ಕುಲಪತಿ ಎಚ್.ಮಹೇಶಪ್ಪ ಅವರು 13 ಜನರ ಹೆಸರನ್ನು ಶಿಫಾರಸು ಮಾಡಿದ್ದರು. ಈ ಪೈಕಿ ಇಬ್ಬರನ್ನು ಮಾತ್ರ ರಾಜ್ಯಪಾಲರು ಪರಿಗಣಿಸಿದ್ದಾರೆ. ಉಳಿದವರನ್ನು ತಾವಾಗಿಯೇ ನೇಮಕ ಮಾಡಿದ್ದಾರೆ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.
ಸಾಮಾನ್ಯವಾಗಿ ಕುಲಪತಿಗಳು ಒಂದು ಸ್ಥಾನಕ್ಕೆ ಮೂವರ ಹೆಸರನ್ನು ಶಿಫಾರಸು ಮಾಡುತ್ತಾರೆ. ಆ ಪೈಕಿ ಒಬ್ಬರ ಹೆಸರನ್ನು ರಾಜ್ಯಪಾಲರು ಪರಿಗಣಿಸುತ್ತಾರೆ. ಕುಲಪತಿಗಳು ಹೇಳಿದವರನ್ನೇ ಮಾಡಬೇಕಾಗಿಲ್ಲ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಚ್.ಪಿ.ಖಿಂಚ `ಪ್ರಜಾವಾಣಿ'ಗೆ ತಿಳಿಸಿದರು.
ಸೇವಾ ಹಿರಿತನ, ಡೀನ್ ಹುದ್ದೆಯಲ್ಲಿರುವುದು ಇತ್ಯಾದಿ ಅಂಶಗಳನ್ನು ಪರಿಗಣಿಸಿ ಕುಲಪತಿಗಳು ಪಟ್ಟಿ ನೀಡಬೇಕಾಗುತ್ತದೆ. ಇದರ ಪಾಲನೆ ಆಗದೆ ಇದ್ದರೆ, ಪಟ್ಟಿಯಲ್ಲಿ ಬದಲಾವಣೆ ಮಾಡುವ ಅಧಿಕಾರ ರಾಜ್ಯಪಾಲರಿಗೆ ಇದೆ ಎಂದು ಮತ್ತೊಬ್ಬ ವಿಶ್ರಾಂತ ಕುಲಪತಿ ಡಾ.ಬಾಲವೀರ ರೆಡ್ಡಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.