ADVERTISEMENT

ವಿದ್ಯಾರ್ಥಿಗಳ ಆವಿಷ್ಕಾರಗಳಿಗೆ ವೇದಿಕೆಯಾದ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2013, 19:30 IST
Last Updated 14 ಡಿಸೆಂಬರ್ 2013, 19:30 IST
ಎಂ.ಎಸ್‌.­ರಾಮಯ್ಯ ಕಾಲೇಜಿನ  ಏರೋ­ನಾಟಿಕ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು  ಆವಿಷ್ಕರಿಸಿದ‘ಅನ್‌ಮ್ಯಾನ್ಡ್‌ ಏರ್‌ವೆಹಿಕಲ್‌ ಫಾರ್‌ ಲಾಂಗ್‌ ಎಂಡ್ಯುರೆನ್ಸ್‌ ಸರ್ವೀಲೆನ್ಸ್‌’ ವಿಮಾನ ಮಾದರಿಯನ್ನು ಅತಿಥಿಗಳಿಗೆ ತೋರಿಸುತ್ತಿರುವ ವಿದ್ಯಾರ್ಥಿಗಳು
ಎಂ.ಎಸ್‌.­ರಾಮಯ್ಯ ಕಾಲೇಜಿನ ಏರೋ­ನಾಟಿಕ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು ಆವಿಷ್ಕರಿಸಿದ‘ಅನ್‌ಮ್ಯಾನ್ಡ್‌ ಏರ್‌ವೆಹಿಕಲ್‌ ಫಾರ್‌ ಲಾಂಗ್‌ ಎಂಡ್ಯುರೆನ್ಸ್‌ ಸರ್ವೀಲೆನ್ಸ್‌’ ವಿಮಾನ ಮಾದರಿಯನ್ನು ಅತಿಥಿಗಳಿಗೆ ತೋರಿಸುತ್ತಿರುವ ವಿದ್ಯಾರ್ಥಿಗಳು   

ಬೆಂಗಳೂರು: ದೇಶದ ರಕ್ಷಣೆಗೆ ಸಿದ್ಧ ಪಡಿಸಿದ ಡ್ರೋನ್‌ ಮಾದರಿಯ ವಿಮಾನ, ಮೆಟ್ರೊ ಮಾದರಿಯಲ್ಲಿ ಸಂಚರಿಸುವಂತಹ ನೂತನ ಕಾರು, ಲೋಹಗಳ ಗುಣಮಟ್ಟ ಅಳೆಯುವ ಯಂತ್ರ, ಡಿಸೈನರ್‌ಗಳಿಗೆ ಅನುಕೂಲ­ವಾಗುವಂತೆ ತಯಾರಿಸಿದ ಕಂಪ್ಯೂಟರ್‌ ಟೇಬಲ್‌ಗಳು–
ಇವೆಲ್ಲಾ ಕಂಡುಬಂದಿದ್ದು ‘ಎಂ.ಎಸ್‌. ರಾಮಯ್ಯ ಸ್ಕೂಲ್‌ ಆಫ್‌ ಅಡ್ವಾನ್ಸ್ಡ್‌ ಸ್ಟಡೀಸ್‌’ ಸಂಸ್ಥೆ ಆಯೋಜಿಸಿದ್ದ ಗ್ರೂಪ್‌ ಪ್ರಾಜೆಕ್ಟ್‌ ಪ್ರದರ್ಶನದಲ್ಲಿ.

ಪೀಣ್ಯದ ಕೈಗಾರಿಕಾ ವಲಯ (ಪಿಐಎ)ದಲ್ಲಿರುವ ಎಂ.ಎಸ್‌. ರಾಮಯ್ಯ ಇನ್‌ಸ್ಟಿಟ್ಯೂಟ್‌ ವಿದ್ಯಾರ್ಥಿ ಗಳು ತಮ್ಮ ಶೈಕ್ಷಣಿಕ ಕಾರ್ಯಕ್ರಮದ ಭಾಗವಾಗಿ ಕಡಿಮೆ  ವೆಚ್ಚದಲ್ಲಿ ತಯಾ ರಿಸಿದ ಮಾದರಿ­ಗಳು ಎಲ್ಲರ ಕಣ್ಮನ ಸೆಳೆದವು.

ಪ್ರತಿ ತಂಡ ತಾವು ಸಿದ್ಧಪಡಿಸಿದ ಮಾದರಿಯ ಬಗ್ಗೆ ಹೆಮ್ಮೆಯಿಂದ ಪರಿ­ಚಯಿಸಿ ಅದರ ಸಾಧಕ– ಬಾಧಕಗಳನ್ನು ವಿವರಿಸಿದರು.
ಪರಿಸರ ಸ್ನೇಹಿ ಹಸಿರು ಬಸ್‌­ನಿಲ್ದಾಣಗಳು,  ಅಟೊಮೋಟಿವ್‌ ಎಂಜಿ­ನಿಯರಿಂಗ್‌ ವಿಭಾಗ ಸಿದ್ಧಪಡಿಸಿದ ಆಲ್‌ ವೀಲ್‌ ಸೀಟರ್‌ ಎಂಬ ಕಾರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಸೈಕಲ್‌ ಪೆಡಲ್‌ ಮಾದರಿಯಲ್ಲಿ ಓಡಿಸಬಹುದಾದ ಆರು ಜನರು ಹೋಗಬಹುದಾದ ಬಸ್ಸು! ಅಬ್ಬಾ ಕಣ್ಣು ಹಾಯಿಸಿದಷ್ಟೂ ಬರೀ ಯಂತ್ರಗಳದ್ದೇ ಕಾರುಬಾರು.

ವಿದ್ಯಾರ್ಥಿಗಳ ಸೃಜನಶೀಲತೆ ಹಾಗೂ ತಾಂತ್ರಿಕ ಕೌಶಲ್ಯಕ್ಕೆ ವೇದಿಕೆಯಾಗಿದ್ದ ಪ್ರದರ್ಶನದಲ್ಲಿ, ಎಲ್ಲ ಮಾದರಿಗಳನ್ನು ಕಡಿಮೆ ವೆಚ್ಚದಲ್ಲಿ ತಯಾರಿಸಿರುವುದು  ವಿಶೇಷ.

‘ಕಡಿಮೆ ಬೆಲೆಯಲ್ಲಿ ತಯಾರಾಗಿದೆ ಎಂಬ  ತಾತ್ಸಾರ ಬೇಡ, ಇದರ ಬಾಳಿಕೆ ಜಾಸ್ತಿ. ಇನ್ನಷ್ಟು ಅಭಿವೃದ್ಧಿ ಪಡಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿ­ದರೆ ಜನಸ್ನೇಹಿ ಮತ್ತು ಪರಿಸರಸ್ನೇಹಿ ಎಂಬ ಹೆಗ್ಗಳಿಕೆ ಪಡೆಯುವಲ್ಲಿ ನಮ್ಮ ಮಾದರಿ ಹಿಂದೆ ಬೀಳುವುದಿಲ್ಲ’ ಎಂಬುದು ವಿದ್ಯಾರ್ಥಿಗಳ ಆತ್ಮವಿಶ್ವಾಸದ ನುಡಿ.

ನೈಸರ್ಗಿಕ ವಸ್ತುಗಳನ್ನು ಬಳಸಿ ಹೇಗೆ ಸುಂದರ ಮನಮೋಹಕ ವಸ್ತುಗಳನ್ನು ಸಿದ್ಧಪಡಿಸಬಹುದು ಎಂಬ ಕ್ರಿಯಾಶೀಲತೆಗೆ ಎಂ.ಎಸ್‌.ರಾಮಯ್ಯ ಇನ್‌ಸ್ಟಿಟ್ಯೂಟ್‌ ಪ್ರಾಡಕ್ಟ್‌ ಡಿಸೈನ್‌ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ವಸ್ತುಗಳೇ ಸಾಕ್ಷಿಯಾಗಿದ್ದವು.
ಇದಲ್ಲದೇ, ಕಂಪನಿ ಅಥವಾ ಸಂಸ್ಥೆಗೆ ಒಂದು ವಿಷಯಕ್ಕೆ ಸಂಬಂಧಿಸಿ ಹೇಗೆ ವಿಭಿನ್ನ ಲಾಂಛನಗಳನ್ನು ಸಿದ್ಧಪಡಿಸ­ಬಹುದು ಎಂಬುದನ್ನು ವಿದ್ಯಾರ್ಥಿಗಳು ಸರಳ, ಸುಲಭ ಮತ್ತು ಕ್ರಿಯಾಶೀಲ ಮಾರ್ಗವನ್ನೂ ತಯಾರಿಸಿದ್ದಾರೆ.

‘ವಿದ್ಯಾರ್ಥಿಗಳು ತಂಡದ ಮೂಲಕ ತಮ್ಮ ಸೃಜನಶೀಲತೆ ಅಭಿವ್ಯಕ್ತಪಡಿಸಲು  ಉತ್ತೇಜನ ನೀಡಿದ್ದೇವೆ.
ಅದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡಿರುವುದಕ್ಕೆ  ಈ ಪ್ರದರ್ಶನ ಸಾಕ್ಷಿಯಾಗಿದೆ’  ಎನ್ನುತ್ತಾರೆ ಎಂ.ಎಸ್‌. ರಾಮಯ್ಯ ಸ್ಕೂಲ್‌ ಆಫ್‌ ಅಡ್ವಾನ್ಸ್ಡ್‌ ಸ್ಟಡೀಸ್‌ ಸಂಸ್ಥೆಯ ಅಧ್ಯಕ್ಷ ಡಾ.ಎಸ್‌.ಆರ್‌.­ಶಂಕಪಾಲ್‌ ಮತ್ತು ಇಂಡಸ್ಟ್ರಿಯಲ್‌ ಡಿಸೈನರ್‌ ಪ್ರೊ.ಚನ್ನಗಿರಿ ಗೋಪಿನಾಥ್.

ಗ್ರೂಪ್‌ ಪ್ರಾಜೆಕ್ಟ್‌ ಪ್ರದರ್ಶನಕ್ಕೆ ಪಿಐಎ ಅಧ್ಯಕ್ಷೆ ಲತಾ ಗಿರೀಶ್ ಚಾಲನೆ ನೀಡಿದರು. ಕೆನರಾ ಹೈಡ್ರಾಲಿಕ್ಸ್‌ ವ್ಯವಸ್ಥಾಪಕ ನಿರ್ದೇಶಕ ಸಂತೋಷ್‌.­ಎಂ.ಶೆಟ್ಟಿ, ಎಂಎಸ್‌ಎಂಇ ನಿರ್ದೇಶಕ ಎಸ್‌.ಎನ್‌.ರಂಗಪ್ರಸಾದ್‌ ಉಪಸ್ಥಿತರಿದ್ದರು.

ಡ್ರೋನ್‌ ಮಾದರಿ ವಿಮಾನ
ದೇಶದ ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿ ಶತ್ರುಗಳು ಆಕ್ರಮಣ ಮಾಡುವುದು ಸಾಮಾನ್ಯ. ಇಂತಹ ಶತ್ರುಗಳ ಆಕ್ರಮಣದ ಬಗ್ಗೆ, ನಿರ್ಜನ ಪ್ರದೇಶ, ದಟ್ಟ ಕಾಡುಗಳ ನಡುವೆ ಯಾವುದೇ ಅಡೆತಡೆ ಇಲ್ಲದೇ ಸಂಚರಿಸಿ ಅಗತ್ಯ ಫೋಟೊಗಳನ್ನು ತೆಗೆದು ಮಾಹಿತಿ ರವಾನಿಸುವ ಡ್ರೋನ್‌ ಮಾದರಿಯ 'ಅನ್‌ಮ್ಯಾನ್ಡ್‌ ಏರ್‌ವೆಹಿಕಲ್‌ ಫಾರ್‌ ಲಾಂಗ್‌ ಎಂಡ್ಯುರೆನ್ಸ್‌ ಸರ್ವೀಲೆನ್ಸ್‌’ ವಿಮಾನವನ್ನು ಎಂ.ಎಸ್‌.­ರಾಮಯ್ಯ ಕಾಲೇಜಿನ  ಏರೋ­ನಾಟಿಕ್‌ ಎಂಜಿನಿಯರಿಂಗ್‌ ವಿಭಾಗದ ವಿದ್ಯಾರ್ಥಿಗಳು  ಆವಿಷ್ಕರಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿದ ತಂಡದ ನಾಯಕ ಆರ್‌.ಎನ್‌. ಸಂತೋಷ್‌,  ಈಗಾಗಲೇ ಬಳಕೆಯಲ್ಲಿರುವ ಡ್ರೋನ್‌ ವಿಮಾನಗಳಿಗಿಂತ ನಾವು ಅಭಿವೃದ್ಧಿ ಪಡಿಸಿದ ಡ್ರೋನ್‌ಗಳು  ಹೆಚ್ಚು ಕಾಲ ಹಾರಾಡಬಲ್ಲ ಸಾಮರ್ಥ್ಯ ಹೊಂದಿವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.