ADVERTISEMENT

ವಿದ್ಯಾರ್ಥಿಗಳ ಪ್ರತಿಭಟನೆ

ವಿ.ವಿ.ಗೆ ವಿದ್ಯುತ್‌ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 19:30 IST
Last Updated 2 ಜನವರಿ 2014, 19:30 IST

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣಕ್ಕೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದನ್ನು ವಿರೋಧಿಸಿ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅವರ ನೇತೃತ್ವದಲ್ಲಿ ವಿ.ವಿ ವಿದ್ಯಾರ್ಥಿಗಳು ಜ್ಞಾನಭಾರತಿ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಶನಿವಾರದಿಂದ (ಡಿ.28) ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಬೆಸ್ಕಾಂ ಹಾಗೂ ಕೆಪಿಟಿಸಿಎಲ್‌ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ವಿದ್ಯುತ್‌ ವ್ಯತ್ಯಯ ಉಂಟುಮಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿಗಳು ಆರೋಪಿಸಿದರು.

‘ಜ್ಞಾನಭಾರತಿ ಆವರಣದಿಂದ ಮರಿಯಪ್ಪನಪಾಳ್ಯದ ಕಡೆಗೆ ವಿದ್ಯುತ್‌ ಮಾರ್ಗ ಹಾದು ಹೋಗಬೇಕಿದೆ. ನೆಲದಡಿ ವಿದ್ಯುತ್‌ ವೈರ್‌ಗಳನ್ನು ತೆಗೆದುಕೊಂಡು ಹೋಗಲು ಕೆಪಿಟಿಸಿಎಲ್‌ ಯೋಜನೆ ಸಿದ್ಧಪಡಿಸಿದೆ. ಈ ಯೋಜನೆಯಿಂದ ಜ್ಞಾನಭಾರತಿ ಆವರಣದ ಹಲವು ಕಡೆ ರಸ್ತೆ ಅಗೆಯಬೇಕಾಗುತ್ತದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರಣಕ್ಕೆ ಬೆಸ್ಕಾಂ ಅಧಿಕಾರಿಗಳು ನಿತ್ಯವೂ ಬೆಳಿಗ್ಗೆ 6ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್‌ ಪೂರೈಕೆ ಸ್ಥಗಿತಗೊಳಿಸುತ್ತಿದ್ದಾರೆ’ ಎಂದು ಪ್ರೊ.ಬಿ.ತಿಮ್ಮೇಗೌಡ ದೂರಿದರು.

‘ಆರು ದಿನಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ದಿನವಿಡೀ ವಿದ್ಯುತ್‌ ಪೂರೈಕೆ ಇಲ್ಲದೆ ವಿದ್ಯಾರ್ಥಿಗಳ ಸಂಶೋಧನೆ, ಪ್ರಯೋಗಾಲಯ ಕಾರ್ಯ, ನೀರು ಪೂರೈಕೆ, ವಿದ್ಯಾರ್ಥಿ ನಿಲಯಗಳ ಅಡಿಗೆ ಮತ್ತಿತರ ಕೆಲಸಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.