ADVERTISEMENT

ವಿಧಾನಸಭೆ ದುರಸ್ತಿಗೆ ಕ್ರಮ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 19:32 IST
Last Updated 19 ಡಿಸೆಂಬರ್ 2012, 19:32 IST

ಬೆಂಗಳೂರು: ವಿಧಾನಸಭೆ ಮತ್ತು ಅದರ ಮೊಗಸಾಲೆಯ ನವೀಕರಣ ಕಾರ್ಯವನ್ನು ಲೋಕೋಪಯೋಗಿ ಇಲಾಖೆ 16.8 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಂಡಿದೆ.

ಮರದ ನೆಲಹಾಸು ದುರಸ್ತಿ, ಕುರ್ಚಿಗಳಿಗೆ ಹೊಸ ಕುಷನ್ ಮತ್ತು ನೂತನ ಧ್ವನಿವರ್ಧಕ ವ್ಯವಸ್ಥೆ ಅಳವಡಿಕೆ, ಹೊಸದಾಗಿ ಬಣ್ಣ ಬಳಿಯುವುದು ನವೀಕರಣ ಕಾರ್ಯದಲ್ಲಿ ಸೇರಿದೆ. ವಿದ್ಯುತ್ ಕೆಲಸಗಳಿಗೆ 11.3 ಕೋಟಿ ರೂಪಾಯಿ ಹಾಗೂ ಸಿವಿಲ್ ಕೆಲಸಗಳಿಗೆ 5.5 ಕೋಟಿ ರೂಪಾಯಿ ಖರ್ಚಾಗಲಿದೆ.

ಸಿವಿಲ್ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಗೆ ಕಾನೂನು ತೊಡಕು ಎದುರಾಗಿದೆ. ಎಲ್ಲ ಕಾಮಗಾರಿಗಳಿಗೆ ಲೋಕೋಪಯೋಗಿ ಇಲಾಖೆ ಪುನಃ ಟೆಂಡರ್ ಕರೆಯಬೇಕಿದೆ. ಇದರಿಂದ ನವೀಕರಣ ಕಾರ್ಯ ಪೂರ್ಣಗೊಳ್ಳುವುದು ತುಸು ತಡವಾಗಲಿದೆ. ಹೀಗಾಗಿ ಬಜೆಟ್ ಅಧಿವೇಶನವನ್ನು ಬೆಳಗಾವಿಯಲ್ಲಿರುವ ಸುವರ್ಣ ವಿಧಾನಸೌಧದಲ್ಲಿ ನಡೆಸುವ ಸಾಧ್ಯತೆಗಳಿವೆ ಎಂಬ ಮಾತು ಕೇಳಿಬಂದಿದೆ.

ಆದರೆ ಈ ಕುರಿತು `ಪ್ರಜಾವಾಣಿ'ಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಜಗದೀಶ ಶೆಟ್ಟರ್, `ಬಜೆಟ್ ಅಧಿವೇಶನ ಬೆಂಗಳೂರಿನಲ್ಲೇ ನಡೆಯಲಿದೆ. ಅದಕ್ಕೂ ಮುನ್ನ ನವೀಕರಣ ಕಾರ್ಯ ಮುಗಿಯಲಿದೆ' ಎಂದು ಸ್ಪಷ್ಟಪಡಿಸಿದರು.

ಸಿವಿಲ್ ಮತ್ತು ಎಲೆಕ್ಟ್ರಿಕಲ್ ಕಾಮಗಾರಿ ಪೂರ್ಣಗೊಳಿಸಲು ಫೆಬ್ರುವರಿ 15ರವರೆಗೆ ಕಾಲಾವಕಾಶ ಬೇಕು ಎಂದು ಲೋಕೋಪಯೋಗಿ ಇಲಾಖೆ ವಿಧಾನಸಭೆ ಸಚಿವಾಲಯಕ್ಕೆ ತಿಳಿಸಿದೆ. ಇನ್ನೆರಡು ವಾರಗಳಲ್ಲಿ ಸಿವಿಲ್ ಕಾಮಗಾರಿಗಳು ಆರಂಭವಾದರೂ, ಅದು ಮಾರ್ಚ್‌ಗೆ ಮುನ್ನ ಪೂರ್ಣಗೊಳ್ಳುವುದು ಅನುಮಾನ. ಆದರೆ, ಬಜೆಟ್ ಅಧಿವೇಶನದ ನಂತರವೇ ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ, ಟೆಂಡರ್ ಪಡೆದುಕೊಳ್ಳುವವರಿಗೆ ಸರ್ಕಾರ ಸೂಚನೆ ನೀಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.