ADVERTISEMENT

ವಿರೋಧ ಪಕ್ಷದ ಮುಖ್ಯಸಚೇತಕ ಸ್ಥಾನಕ್ಕೆ ತೀವ್ರಗೊಂಡ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 19:53 IST
Last Updated 24 ಸೆಪ್ಟೆಂಬರ್ 2013, 19:53 IST

ಬೆಂಗಳೂರು: ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ಹಾಗೂ ಉಪ ನಾಯಕರ ಹೆಸರು ಒಂದೆರಡು ದಿನದಲ್ಲಿ ಪ್ರಕಟವಾಗಲಿದೆ.

ವಿರೋಧ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಆದರೆ, ಅಂತಿಮ ತೀರ್ಮಾನ ತೆಗೆದು ಕೊಳ್ಳಲು ಸಾಧ್ಯವಾಗಲಿಲ್ಲ.

ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರು ವುದರಿಂದ ಶಾಸಕಾಂಗ ಪಕ್ಷದ ಸಭೆಯಲ್ಲಿ ಒಮ್ಮತ ಮೂಡಿಲ್ಲ. ಹೀಗಾಗಿ  ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇ ಗೌಡ ಅವರೊಂದಿಗೆ ಸಮಾಲೋಚನೆ ನಡೆಸಿದ ನಂತರ  ಹೆಸರನ್ನು ಅಂತಿಮ ಗೊಳಿಸಲು ನಿರ್ಧರಿಸಲಾಗಿದೆ.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಮಧು ಬಂಗಾರಪ್ಪ, ವೈ.ಎಸ್‌.ವಿ.ದತ್ತ, ಮಲ್ಲಿ ಕಾರ್ಜುನ ಖೂಬಾ, ಸುರೇಶ್‌ಬಾಬು, ಎಚ್‌.ಎಸ್‌. ಶಿವಶಂಕರ್‌, ಜಮೀರ್‌ ಅಹ್ಮದ್‌ ಅವರ ಹೆಸರುಗಳು ಮುಖ್ಯ ಸಚೇತಕರ ಸ್ಥಾನಕ್ಕೆ ಪ್ರಸ್ತಾಪವಾಗಿವೆ ಎಂದರು.

ಸಭೆಯಲ್ಲಿ ಮಾತನಾಡಿದ ಮುಖ್ಯ ಸಚೇತಕ ಸ್ಥಾನದ ಆಕಾಂಕ್ಷಿಗಳು, ತಮಗೆ ಅವಕಾಶ ನೀಡಿದರೆ ಸಮರ್ಥವಾಗಿ ನಿಭಾಯಿಸುವ ಮೂಲಕ ಪಕ್ಷದ ಸಂಘ ಟನೆಗೂ ಶ್ರಮಿಸುವುದಾಗಿ ಹೇಳಿದ್ದಾರೆ ಎಂದು ತಿಳಿಸಿದರು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ, ಬಸವರಾಜ ಹೊರಟ್ಟಿ, ಎನ್‌.ಚೆಲುವರಾಯ ಸ್ವಾಮಿ, ಬಿ.ಬಿ. ನಿಂಗಯ್ಯ  ಹಾಗೂ ಕುಮಾರಸ್ವಾಮಿ ಅವರು ಸೇರಿ ನಿರ್ಧಾರ ತೆಗೆದುಕೊಳ್ಳಲಿ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಈ ಐದು ಮಂದಿ ಸೇರಿ ತೆಗೆದು ಕೊಂಡ ತೀರ್ಮಾನವನ್ನು ದೇವೇಗೌಡ ಅವರಿಗೆ ತಿಳಿಸಲಾಗುತ್ತದೆ. ಅಂತಿಮ ವಾಗಿ ಅವರ ಸೂಚನೆಯಂತೆ ಮುಖ್ಯಸಚೇತಕರ ನೇಮಕವಾಗಲಿದೆ.

ವೈಯಕ್ತಿಕ ಕಾರಣಗಳಿಂದಾಗಿ ಮಧು ಬಂಗಾರಪ್ಪ, ಜಮೀರ್‌ ಅಹ್ಮದ್‌ ಸಭೆಯಲ್ಲಿ ಭಾಗವಹಿಸಿರಲಿಲ್ಲ ಎಂದು ಗೊತ್ತಾಗಿದೆ.

ಮುಖ್ಯಸಚೇತಕರಾಗಿ ಮಧು ಬಂಗಾರಪ್ಪ, ಉಪ ನಾಯಕರಾಗಿ ಎಚ್‌.ಕೆ.ಕುಮಾರಸ್ವಾಮಿ ಆಯ್ಕೆಯಾ ಗುವ ಸಾಧ್ಯತೆಗಳು ಹೆಚ್ಚಾಗಿವೆ.

ದಲಿತ ಸಮುದಾಯಕ್ಕೆ ಉಪ ನಾಯಕರ ಸ್ಥಾನ ಹಾಗೂ ಹಿಂದುಳಿದ ವರ್ಗದವರಿಗೆ ಮುಖ್ಯಸಚೇತಕರ ಸ್ಥಾನ ದೊರೆಯಲಿದೆ. ಮುಂಬರುವ ಲೋಕ ಸಭಾ ಚುನಾವಣೆ, ಪಕ್ಷ ಸಂಘಟನೆ, ಜಾತಿ ಲೆಕ್ಕಾಚಾರವನ್ನು ಗಮನದಲ್ಲಿಟ್ಟು ಕೊಂಡು ನೇಮಕ ಮಾಡಲಾಗುತ್ತದೆ ಎನ್ನಲಾಗಿದೆ.

ಪಕ್ಷದ ಪದಾಧಿಕಾರಿಗಳ ನೇಮಕ ವನ್ನೂ ಸದ್ಯದಲ್ಲೇ ಮಾಡಲಾಗುತ್ತದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ, ರಾಜ್ಯ ಘಟಕದ ಅಧ್ಯಕ್ಷ ಎ.ಕೃಷ್ಣಪ್ಪ, ಕುಮಾರಸ್ವಾಮಿ ಹಾಗೂ ಹಿರಿಯ ಮುಖಂಡರು ಸೇರಿ ಪದಾಧಿ ಕಾರಿಗಳ ಪಟ್ಟಿಯನ್ನು ಅಂತಿಮಗೊಳಿಸಲಿ ದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.