ADVERTISEMENT

ವಿವಿಯಲ್ಲಿ ಮೂಲ ಸೌಕರ್ಯ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2012, 19:30 IST
Last Updated 8 ನವೆಂಬರ್ 2012, 19:30 IST

ಬೆಂಗಳೂರು: `ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಉತ್ತಮ ಮೂಲಸೌಕರ್ಯ ಒದಗಿಸಲು ಶೀಘ್ರದಲ್ಲೇ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಲಾಗುವುದು~ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ರಂಗಸ್ವಾಮಿ ಹೇಳಿದರು.

ನಗರದ ಸೆಂಟ್ರಲ್ ಕಾಲೇಜಿನಲ್ಲಿ ಗುರುವಾರ ನಡೆದ ಸಿಂಡಿಕೇಟ್ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

`ವಿಶ್ವವಿದ್ಯಾಲಯದಲ್ಲಿ ಮೂಲಸೌಕರ್ಯದ ಕೊರತೆಯ ಬಗ್ಗೆ ಹಿಂದಿನಿಂದಲೂ ವಿದ್ಯಾರ್ಥಿ ವಲಯದಲ್ಲಿ ಅಸಮಾಧಾನವಿದೆ. ಇದನ್ನು ತಪ್ಪಿಸಲು ಆದ್ಯತೆಯ ವಿಷಯವಾಗಿ ಸಿಂಡಿಕೇಟ್ ಸಭೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಅನುಮೋದನೆ ಪಡೆಯಲಾಗಿದೆ~ ಎಂದು ಅವರು ತಿಳಿಸಿದರು.

`ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ವಿಶ್ವವಿದ್ಯಾಲಯದ ಕಾಮಗಾರಿ ವಿಭಾಗವು ಯೋಜನಾ ವೆಚ್ಚದ ವರದಿಯನ್ನು ತಯಾರಿಸಬೇಕಿದೆ. ಯೋಜನಾ ವೆಚ್ಚದ ವರದಿಯನ್ನು ಆಧರಿಸಿ, ನಂತರ ಕಾಮಗಾರಿಗಳಿಗೆ ಒಪ್ಪಿಗೆ ನೀಡಲಾಗುವುದು~ ಎಂದರು.

`ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯದಲ್ಲಿರುವ ವಿದ್ಯಾರ್ಥಿಗಳ ಪ್ರತಿದಿನದ ಊಟದ ವೆಚ್ಚವನ್ನು 35ರಿಂದ 50 ರೂಪಾಯಿಗೆ ಹೆಚ್ಚಿಸಲು ಮತ್ತು ವಿಶ್ವವಿದ್ಯಾಲಯದ ದಿನಗೂಲಿ ನೌಕರರ ವೇತನವನ್ನು 7,500ರಿಂದ 9,500 ರೂಪಾಯಿಗೆ ಹೆಚ್ಚಿಸಲು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ~ ಎಂದು ಅವರು ತಿಳಿಸಿದರು.

`ಅಂಧ ಅಭ್ಯರ್ಥಿಗಳಿಗಾಗಿ ವಿಶೇಷ ಬಿ.ಇಡಿ ಕೋರ್ಸ್ ನಡೆಸಲು ನಗರದ ಹೆಣ್ಣೂರಿನ ಎಸ್.ಆರ್.ಚಂದ್ರಶೇಖರ್ ವಾಕ್ ಶ್ರವಣ ಸಂಸ್ಥೆಗೆ ಅನುಮತಿ ನೀಡಲಾಗಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಪರೀಕ್ಷೆಯ ಉತ್ತರ ಪತ್ರಿಕೆಗಳ ನಕಲು ಪ್ರತಿ (ಫೋಟೊ ಕಾಪಿ) ನೀಡಲು ಮತ್ತು ಪಿಎಚ್.ಡಿ ಕೋರ್ಸ್ ವರ್ಕ್ ಅವಧಿಯನ್ನು ಒಂದು ವರ್ಷದಿಂದ ಆರು ತಿಂಗಳಿಗೆ ಇಳಿಸುವ ಬಗ್ಗೆ ಸಿಂಡಿಕೇಟ್ ಸಭೆಯ ಒಪ್ಪಿಗೆ ಪಡೆಯಲಾಗಿದೆ~ ಎಂದರು.

ಶಿಕ್ಷಣ ಪರಿಷತ್ತಿನ ತೀರ್ಮಾನ ಅಂತಿಮ
`ಬೆಂಗಳೂರು ವಿವಿ ವ್ಯಾಪ್ತಿಯ ಬಿ.ಇಡಿ ಮತ್ತು ಎಂ.ಇಡಿ ಕಾಲೇಜುಗಳ ಶಿಕ್ಷಣ ಗುಣಮಟ್ಟದ ಬಗ್ಗೆ ಸಮೀಕ್ಷೆ ನಡೆಸಲು ವಿಶ್ವವಿದ್ಯಾಲಯದ ಶಿಕ್ಷಣ ಪರಿಷತ್ತು ನೇಮಿಸಿದ್ದ ಕಾರ್ಯಪಡೆಯು ಸುಮಾರು 53 ಕಾಲೇಜುಗಳ ಶಿಕ್ಷಣ ಗುಣಮಟ್ಟ ಸರಿಯಿಲ್ಲ ಎಂದು ವರದಿ ನೀಡಿದೆ.
 
ಮುಂದಿನ ಶಿಕ್ಷಣ ಪರಿಷತ್ತಿನ ಸಭೆಯಲ್ಲಿ ವರದಿ ಅಂಗೀಕರಿಸುವ ಬಗ್ಗೆ ಚರ್ಚೆ ನಡೆಯಲಿದೆ. ವರದಿ ಅಂಗೀಕರಿಸುವ ವಿಷಯದಲ್ಲಿ ಶಿಕ್ಷಣ ಪರಿಷತ್ತಿನ ತೀರ್ಮಾನ ಅಂತಿಮ~ ಎಂದು ಪ್ರೊ.ಎನ್.ರಂಗಸ್ವಾಮಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.