ಬೆಂಗಳೂರು: `ವೃದ್ಧಾಪ್ಯವು ಜೈವಿಕ ಬದಲಾವಣೆಯೇ ಹೊರತು ರೋಗವಲ್ಲ. ವೃದ್ಧಾಪ್ಯದ ಜೀವನವನ್ನೂ ವ್ಯವಸ್ಥಿತವಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ~ ಎಂದು ಹಿರಿಯ ವೈದ್ಯ ಡಾ.ಬಿ.ಜಿ.ಚಂದ್ರಶೇಖರ್ ಹೇಳಿದರು.
ನಗರದಲ್ಲಿ ಶನಿವಾರ ಸ್ಪಂದನ ಆಸ್ಪತ್ರೆಯು ವಿಶ್ವ ಆರೋಗ್ಯ ದಿನದ ಅಂಗವಾಗಿ ಆಯೋಜಿಸಿದ್ದ ಪುಸ್ತಕ ಮಳಿಗೆಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, `ವೈದ್ಯಲೋಕದ ಆವಿಷ್ಕಾರಗಳಿಂದಾಗಿ ವಯಸ್ಸಾದ ಕಾರಣದಿಂದ ಮರಣ ಹೊಂದುವವರ ಪ್ರಮಾಣವು ಕಡಿಮೆಯಾಗುತ್ತಿದೆ. ಮುಂದಿನ ದಿನಗಳಲ್ಲಿ 60 ವರ್ಷ ಮೀರಿದವರ ಸಂಖ್ಯೆಯು ಗಣನೀಯವಾಗಿ ಏರಿಕೆಯಾಗಲಿದೆ.
ಆಗ ವೃದ್ಧರ ಸೇವೆಯನ್ನೇ ಪಡೆದುಕೊಳ್ಳುವುದು ಸಮಾಜಕ್ಕೆ ಅನಿವಾರ್ಯವಾಗಲಿದೆ. ಹೀಗಾಗಿ ವೃದ್ಧಾಪ್ಯವನ್ನೂ ಸರಿಯಾಗಿ ನಿಭಾಯಿಸುವುದನ್ನು ಜನರು ಈಗಿಂದಲೇ ಅರಿಯಬೇಕು~ ಎಂದು ಅವರು ತಿಳಿಸಿದರು.
ವೈದ್ಯರಾದ ಡಾ.ವಿಶ್ವರೂಪಾಚಾರ್ ಮಾತನಾಡಿ, `ವೈದ್ಯರು ಚಿಕಿತ್ಸೆ ನೀಡುವ ಜೊತೆಗೇ ವೈದ್ಯ ಸಾಹಿತ್ಯ ರಚನೆಯ ಬಗ್ಗೆಯೂ ಆಸಕ್ತಿ ವಹಿಸಬೇಕು.
ರೋಗಗಳು ಹಾಗೂ ಚಿಕಿತ್ಸೆಗಳ ಬಗ್ಗೆ ರೋಗಿಗಳಲ್ಲಿ ಅರಿವು ಮೂಡಿಸಲು ವೈದ್ಯರು ವೈದ್ಯ ಸಾಹಿತ್ಯದ ಓದು ಮತ್ತು ಬರವಣೆಗೆಯನ್ನು ರೂಡಿಸಿಕೊಳ್ಳಬೇಕು~ ಎಂದರು. ಕಾರ್ಯಕ್ರಮದಲ್ಲಿ ಕನ್ನಡ ವೈದ್ಯ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ವೈದ್ಯ ವಿಜ್ಞಾನಕ್ಕೆ ಸಂಬಂಧಿಸಿದ ನಾಲ್ಕು ಕಿರು ಪುಸ್ತಿಕೆಗಳನ್ನು ಬಿಡುಗಡೆ ಮಾಡಲಾಯಿತು. ಆಸ್ಪತ್ರೆಯ ನಿರ್ದೇಶಕ ಡಾ.ಶ್ರೀನಿವಾಸ್, ವೈದ್ಯರಾದ ಡಾ.ಪ್ರಿಯ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.