ADVERTISEMENT

ವೃದ್ಧೆ ಕೊಂದು ಚಿನ್ನ ಲೂಟಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2011, 19:45 IST
Last Updated 21 ಫೆಬ್ರುವರಿ 2011, 19:45 IST

ಬೆಂಗಳೂರು: ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ವೃದ್ಧೆಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿ ಚಿನ್ನಾಭರಣ ದೋಚಿದ ಘಟನೆ ಬಯ್ಯಪ್ಪನಹಳ್ಳಿ ಸಮೀಪದ ಗರಕಮಂತನಪಾಳ್ಯದಲ್ಲಿ ಸೋಮವಾರ ಮುಂಜಾನೆ ನಡೆದಿದೆ.

ಗರಕಮಂತನಪಾಳ್ಯದ ಭಕ್ತ ಪರ್ಲ್ ಅಪಾರ್ಟ್‌ಮೆಂಟ್ ನಿವಾಸಿ ಲಲಿತಾ ಮೂರ್ತಿ (61) ಕೊಲೆಯಾದವರು. ಅಪಾರ್ಟ್‌ಮೆಂಟ್‌ನ ಒಂದನೇ ಮಹಡಿಯಲ್ಲಿ ಅವರೊಬ್ಬರೇ ವಾಸವಿದ್ದರು.

ಅವರ ಪುತ್ರ ವಿಕಾಸ್ ಎಂಬುವರು ಅಮೆರಿಕದಲ್ಲಿ ನೆಲೆಸಿದ್ದು, ಪುತ್ರಿ ಡಾ.ಬಿಂದು ಮತ್ತು ಅಳಿಯ ಶ್ರೀನಿವಾಸ್ ಅವರು ಭಕ್ತ ಪರ್ಲ್ ಅಪಾರ್ಟ್‌ಮೆಂಟ್‌ನ ಹಿಂಬದಿಯಲ್ಲಿರುವ ಪರ್ಲ್‌ಗ್ರೇಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಲಲಿತಾ ಅವರನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಅವರ ಕತ್ತಿನಲ್ಲಿದ್ದ ಸರವನ್ನು ಕಿತ್ತುಕೊಂಡು ಹೋಗಿದ್ದಾರೆ. ಅಲ್ಲದೇ ಆಭರಣಗಳಿಗಾಗಿ ಮನೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಬೆಳಿಗ್ಗೆ ಎಂಟು ಗಂಟೆ ಸುಮಾರಿಗೆ ಮನೆಯ ಕೆಲಸದಾಕೆ ಮನೆಗೆ ಹೋದಾಗ ಬಾಗಿಲು ತೆರೆದಿತ್ತು. ನಂತರ ಅವರು ಒಳಗೆ ಹೋಗಿ ನೋಡಿದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಪರಿಚಿತ ವ್ಯಕ್ತಿಗಳೇ ಈ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಹೇಳಿದ್ದಾರೆ. ಬಯ್ಯಪ್ಪನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.