ಬೆಂಗಳೂರು: ಬಿಬಿಎಂಪಿ ವತಿಯಿಂದ ವೈಟ್ ಟಾಪಿಂಗ್ ಕಾಮಗಾರಿ ಕೈಗೊಂಡಿರುವ ರಸ್ತೆಗಳಲ್ಲಿ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಹೊಸೂರು ರಸ್ತೆಯ ಆನೆಪಾಳ್ಯ ಜಂಕ್ಷನ್ನಿಂದ ಫೋರಂ ಮಾಲ್ವರೆಗೆ ಹಾಗೂ ಕೋರಮಂಗಲದ 20ನೇ ಮುಖ್ಯರಸ್ತೆಗೆ (ಗಣೇಶ ಮಂದಿರ ರಸ್ತೆ) ಹೋಗುವ ಮುಖ್ಯ ಕ್ಯಾರಿಯೇಜ್ ವೇವರೆಗೆ ಇದೇ 29ರಿಂದ ಡಿಸೆಂಬರ್ 29ರವರೆಗೆ ಕಾಮಗಾರಿ ಕೈಗೊಳ್ಳಲಾಗುತ್ತದೆ.
ಹೊರವರ್ತುಲ ರಸ್ತೆಯ ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣದಿಂದ ಯಶವಂತಪುರ ಮೆಟ್ರೊ ನಿಲ್ದಾಣದವರೆಗೆ ಇದೇ 30ರಿಂದ ಡಿಸೆಂಬರ್ 15ರವರೆಗೆ ಕಾಮಗಾರಿ ನಡೆಸಲಾಗುತ್ತದೆ.
ಈ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಸರ್ವಿಸ್ ರಸ್ತೆಗಳ ಮೂಲಕ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.
ಓಕಳಿಪುರ ಜಂಕ್ಷನ್: ಓಕಳಿಪುರ ಜಂಕ್ಷನ್ನಿಂದ ಕಾರಂಜಿ ವೃತ್ತದವರೆಗೆ ಅಷ್ಟಪಥಗಳ ಕಾರಿಡಾರ್ ನಿರ್ಮಾಣ ಪ್ರಗತಿಯಲ್ಲಿದೆ. ಇಲ್ಲಿ ಇದೇ 29ರಿಂದ ಡಿಸೆಂಬರ್ 31ರವರೆಗೆ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ರಾಜಾಜಿನಗರದಿಂದ ಮೆಜೆಸ್ಟಿಕ್ ಕಡೆಗೆ (ಕಾರಂಜಿ ವೃತ್ತ) ಹೋಗುವ ವಾಹನಗಳು ಪಿ.ಎಫ್ ವೃತ್ತದಲ್ಲಿ ಎಡತಿರುವು ಪಡೆದು, ಚರ್ಚ್ ಬಳಿ ಯು–ತಿರುವು ಪಡೆದು ಕಾರಂಜಿ ವೃತ್ತಕ್ಕೆ ಹೋಗಬೇಕು. ಬಿಎಂಟಿಸಿ ಹಾಗೂ ಕೆಎಸ್ಆರ್ಟಿಸಿ ಬಸ್ಗಳು ಕೃಷ್ಣ ಫ್ಲೋರ್ಮಿಲ್ ಬಳಿ ಬಲ ತಿರುವು ಪಡೆದು ಧನ್ವಂತರಿ ರಸ್ತೆ ಮೂಲಕ ಮೆಜೆಸ್ಟಿಕ್ ಕಡೆಗೆ ಹೋಗಬೇಕು. ಮಲ್ಲೇಶ್ವರದಿಂದ ರಾಜಾಜಿನಗರದ ಕಡೆಗೆ ಹೋಗುವ ವಾಹನಗಳು ಫೌಂಟೇನ್ ವೃತ್ತದಲ್ಲಿ ಯು–ತಿರುವು ಪಡೆದು ಪಿ.ಎಫ್ ವೃತ್ತದ ಮೂಲಕ ಹೋಗಬೇಕು ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್ (ಯೋಜನೆ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.