ADVERTISEMENT

ಶಮೀಂ ಜಾಮೀನು: ವಿಚಾರಣೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2013, 19:56 IST
Last Updated 10 ಸೆಪ್ಟೆಂಬರ್ 2013, 19:56 IST

ಬೆಂಗಳೂರು: ಅಕ್ರಮ ಗಣಿಗಾರಿಕೆಗೆ ಸಹಕಾರ ನೀಡಿದ ಆರೋಪ ಎದುರಿಸುತ್ತಿರುವ ನಿವೃತ್ತ ಐಎಎಸ್‌ ಅಧಿಕಾರಿ ಶಮೀಂ ಬಾನು ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಲಯ ಗುರುವಾರಕ್ಕೆ ಮುಂದೂಡಿದೆ. ಜಾಮೀನು ಅರ್ಜಿಗೆ ತಕರಾರು ಅರ್ಜಿ ಸಲ್ಲಿಸಿದ ಸಿಬಿಐ, ಇದೊಂದು ಗಂಭೀರ ಪ್ರಕರಣವಾಗಿರುವುದರಿಂದ ಜಾಮೀನು ಮಂಜೂರು ಮಾಡಬಾರದು ಎಂದು ಕೋರಿತು.

ನ್ಯಾಯಾಧೀಶ ಶ್ರೀಶಾನಂದ ಅವರು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದರು. ಶಮೀಂ ಪರ ಹಿರಿಯ ವಕೀಲ ಉದಯ್‌ ಹೊಳ್ಳ ಹಾಜರಾಗಿದ್ದರು.

ಆರೋಪ ಮುಕ್ತ: ಬಂಧನದಿಂದ ಬಿಡುಗಡೆ
ವಿಷಪೂರಿತ ರಾಸಾಯನಿಕ ಗೊಬ್ಬರ ಮಾರಾಟ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದ್ದ ಆರೋಪಿ­ಯೊಬ್ಬನನ್ನು ಹೈಕೋರ್ಟ್‌ ಬಂಧಮುಕ್ತಗೊಳಿಸಿದೆ. ‘ಮ್ಯೂರಿಯೆಟ್‌ ಆಫ್ ಪೋಟ್ಯಾಷ್’  ರಾಸಾಯನಿಕ ಗೊಬ್ಬರವನ್ನು ಅಕ್ರಮವಾಗಿ ಮಾರಾಟ ಮಾಡಿದ ಆರೋಪದ ಮೇಲೆ ಪಾಂಡ್ಯನ್‌ ಮುರುಗನ್‌ ಎಂಬಾತನನ್ನು ಬಂಧಿಸು ವಂತೆ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ 2010ರ ಸೆ.16ರಂದು ಆದೇಶ ಹೊರಡಿಸಿದ್ದರು.

ಬೀದಿಶಾ ಗೋಯೆನ್ ಎಂಬು­ವ­ವರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ತಮ್ಮ ಪತಿ ಪಾಂಡ್ಯನ್ ಮುರುಗನ್‌ ಅವರನ್ನು ಪತ್ತೆ ಮಾಡಿ ಕೊಡುವಂತೆ ಕೋರಿದ್ದರು. ಪೊಲೀಸರು ಜೈಲಿನಲ್ಲಿದ್ದ ಪಾಂಡ್ಯನ್‌­ನನ್ನು  ಹೈಕೋರ್ಟ್‌ಗೆ ಹಾಜರು ಪಡಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಎಸ್.ಕೆಂಪಣ್ಣ ಮತ್ತು ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಅವರಿದ್ದ ಪೀಠವು ಆರೋಪ­ವನ್ನು ವಜಾಗೊಳಿಸಿ ಪಾಂಡ್ಯನ್‌ನನ್ನು ಬಂಧಮುಕ್ತಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.