ADVERTISEMENT

ಶಾಲಾ ವಾಹನ ಡಿಕ್ಕಿ : ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಬೆಂಗಳೂರು:  ಶಾಂತಿನಗರ ಸಮೀಪದ ಔಟ್‌ರೀಚ್‌ ಶಾಲೆ ಆವರಣದಲ್ಲಿ ಬುಧವಾರ ಆಟವಾಡುತ್ತಿದ್ದ  ಮನೀಷ್‌ ಎಂಬ ಒಂದನೇ ತರಗತಿ ವಿದ್ಯಾರ್ಥಿಗೆ ಶಾಲಾ ವಾಹನ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮನೀಷ್‌, ಸುಧಾಮನಗರ ನಿವಾಸಿಗಳಾದ ಮಹೇಶ್‌ ಮತ್ತು ಅಶ್ವಿನಿ ದಂಪತಿಯ ದ್ವಿತೀಯ ಪುತ್ರ. ಮಹೇಶ್‌ ಸಿವಿಲ್‌ ಗುತ್ತಿಗೆದಾರರಾಗಿದ್ದಾರೆ. ಮಧ್ಯಾಹ್ನ 2.45ರ ಸುಮಾರಿಗೆ ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ಮನೀಷ್‌ಗೆ ಅದೇ ಶಾಲೆಯ ವಾಹನ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ತಲೆಗೆ ಪೆಟ್ಟು ಬಿದ್ದಿದ್ದರಿಂದ ಆತನನ್ನು ಕೂಡಲೇ ವಿಲ್ಸನ್‌ ಗಾರ್ಡನ್‌ನ ಅಗಡಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಆತ ಸ್ವಲ್ಪ ಸಮಯದಲ್ಲೇ ಕೊನೆಯುಸಿರೆಳೆದ ಎಂದು ಪೊಲೀಸರು ಹೇಳಿದ್ದಾರೆ.

ಮನೀಷ್‌ನ ಅಣ್ಣ ಯಶವಂತ್‌ ಕೂಡ ಅದೇ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದಾನೆ. ಪ್ರತಿದಿನ ತರಗತಿ ಮುಗಿದ ನಂತರ ತಾಯಿಯೇ ಅವರಿಬ್ಬರನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಮಧ್ಯಾಹ್ನ 2.30ಕ್ಕೆ ತರಗತಿ ಮುಗಿದಿದ್ದು, ಮಕ್ಕಳು ಎಂದಿನಂತೆ ತಾಯಿ ಬರುವವರೆಗೂ  ಚೆಂಡಾಟದಲ್ಲಿ ತೊಡಗಿದ್ದರು. ಇದೇ ವೇಳೆ ಚಾಲಕ ಪ್ರವೀಣ್‌, ಇತರ ಮಕ್ಕಳನ್ನು ವಾಹನದಲ್ಲಿ ಕೂರಿಸಿಕೊಂಡು ಮನೆಗೆ ಬಿಡಲು ಹೋಗುತ್ತಿದ್ದ. ಆಗ ವಾಹನದ ಮುಂದೆ ಉರುಳಿದ ಚೆಂಡನ್ನು ತೆಗೆದುಕೊಳ್ಳಲು ಮುಂದಾದ ಮನೀಷ್‌ಗೆ ವಾಹನ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶಾಲಾ ಆವರಣದಲ್ಲಿ ಮಗ ಸಾವನ್ನಪ್ಪಿರುವುದರಿಂದ ಅದರ ಹೊಣೆಯನ್ನು ಶಾಲಾ ಆಡಳಿತ ಮಂಡಳಿಯವರೇ ಹೊರಬೇಕು. ಆದರೆ, ಅವರು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನದಲ್ಲಿದ್ದಾರೆ. ಅವರು ಈವರೆಗೂ ನಮ್ಮನ್ನು ಸಂಪರ್ಕಿಸಿಲ್ಲ’ ಎಂದು ಮಹೇಶ್‌ ಆಕ್ರೋಶದಿಂದ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.