ಬೆಂಗಳೂರು: ‘ಐಷಾರಾಮಿ ಜೀವನಕ್ಕಾಗಿ ಶಿಕ್ಷಣ ಅಲ್ಲ. ಸುಂದರವಾದ ಬದುಕಿಗೆ ಶಿಕ್ಷಣ’ ಎಂದು ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಎಂ.ಕೆ. ಜಯಮ್ಮ ಮತ್ತು ಬಿ.ಎಸ್.ಆರ್. ಶಾಸ್ತ್ರಿ ಟ್ರಸ್ಟ್ನಿಂದ ನಗರದಲ್ಲಿ ಭಾನುವಾರ ಆಯೋಜಿಸಿದ್ದ ಶಿಷ್ಯ ವೇತನ ವಿತರಣೆ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
‘ಶಿಕ್ಷಣ ನಮ್ಮಲ್ಲಿ ವೈಚಾರಿಕ ಪ್ರಜ್ಞೆ, ಮೌಲ್ಯಗಳನ್ನು ಬೆಳೆಸಿ ಬದುಕು ಸುಂದರವಾಗಿಸುತ್ತದೆ. ಆದರೆ, ನಾವು ಶಿಕ್ಷಣವನ್ನು ಐಷಾರಾಮಿ ಜೀವನಕ್ಕಾಗಿ ಎಂದು ತಪ್ಪಾಗಿ ಭಾವಿಸಿ ವಾಮ ಮಾರ್ಗ ಹಿಡಿಯುತ್ತಿದ್ದೇವೆ’ ಎಂದರು. ‘ಕೇವಲ ನಾಲ್ಕನೇ ತರಗತಿವರೆಗೆ ಓದಿದ ಹಳ್ಳಿಯ ಹೈದ ನದಿಯಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದವರ ಪ್ರಾಣ ಉಳಿಸಿ ಮಾನವೀಯತೆ ಮೆರೆಯುತ್ತಾನೆ.
ಮತ್ತೊಂದೆಡೆ, ಕಂಪ್ಯೂಟರ್ ಸೈನ್ಸ್ನಲ್ಲಿ ಚಿನ್ನದ ಪದಕ ಗಳಿಸಿದ ವ್ಯಕ್ತಿ ಜನರನ್ನು ಕೊಲ್ಲುವುದಕ್ಕಾಗಿ ಉಗ್ರನಾಗುತ್ತಾನೆ. ನಮ್ಮ ಮಧ್ಯೆ ನಡೆದ ಈ ಎರಡೂ ಸಂಗತಿಗಳನ್ನು ನೋಡಿದರೆ ಉನ್ನತ ಶಿಕ್ಷಣದ ಜತೆಗೆ ಮೌಲ್ಯಗಳು, ಮಾನವೀಯತೆಯ ಗುಣಗಳನ್ನೂ ಬೆಳೆಸಬೇಕಾದದ್ದು ಅಗತ್ಯವಿದೆ ಎನಿಸುತ್ತದೆ’ ಎಂದು ಹೇಳಿದರು. ಡಾ. ಎಂ.ಕೆ.ಎಲ್.ಎನ್. ಶಾಸ್ತ್ರಿ ವೇದಿಕೆಯ ಮೇಲಿದ್ದರು.
ಸನ್ಮಾನ: ಸಂಗೀತ ವಿದ್ವಾಂಸ ಡಿ.ವಿ. ನಾಗರಾಜನ್, ಆದಾಯ ತೆರಿಗೆ ಇಲಾಖೆಯ ಕಮಿಷನರ್ ಗೀತಾ ರವಿಚಂದ್ರನ್ ಹಾಗೂ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ತಂಡದ ಡಾ. ಆರ್. ಬಾಲಸುಬ್ರಮಣಿಯಂ, ಡಾ. ಬಿಂದು ಬಾಲಸುಬ್ರಮಣಿಯಂ, ಡಾ. ಎಂ.ಆರ್. ಸೀತಾರಾಮ್, ಡಾ. ಶ್ರೀದೇವಿ ಸೀತಾರಾಮ್, ಡಾ.ಎಂ.ಎ. ಬಾಲಸುಬ್ರಮಣ್ಯ, ಡಾ. ಟಿ.ಜೆ. ಪದ್ಮಜಾ ಹಾಗೂ ಎಚ್.ಡಿ. ಮಾಲತಿ ಅವರನ್ನು ಸನ್ಮಾನಿಸಲಾಯಿತು. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.