ಬೆಂಗಳೂರು: ಅರಮನೆ ಮೈದಾನದಲ್ಲಿರುವ ಶೇಷ್ ಮಹಲ್ಗೆ ಬಂದಿದ್ದ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ತಪಾಸಣೆಗೆ ಅಡ್ಡಿಪಡಿಸಿದ್ದ ಆರೋಪದಡಿ, ಮಹಲ್ನ ವ್ಯವಸ್ಥಾಪಕ ಅನೂಜ್ ಮ್ಯಾಥ್ಯೂ ವರ್ಗೀಸ್ನನ್ನು ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ.
ಇಲಾಖೆಯ ದಕ್ಷಿಣ ವಲಯ (ಕೋರಮಂಗಲ) ಸಹಾಯಕ ಆಯುಕ್ತ ಬಾಬು ಜಿದ್ದಿಮನಿ ನೇತೃತ್ವದ ತಂಡವು ಮಂಗಳವಾರ (ಏಪ್ರಿಲ್ 3) ಸಂಜೆ ಮಹಲ್ಗೆ ಹೋಗಿದ್ದಾಗ ಈ ಘಟನೆ ನಡೆದಿದೆ. ಬಾಬು ನೀಡಿರುವ ದೂರಿನನ್ವಯ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ತಿಳಿಸಿದರು.
ತಪಾಸಣೆ ವೇಳೆ ಹಲವು ದಾಖಲೆಗಳನ್ನು ಜಪ್ತಿ ಮಾಡಿದ್ದ ಅಧಿಕಾರಿಗಳು, ಅವುಗಳನ್ನೆಲ್ಲ ಬ್ಯಾಗ್ನಲ್ಲಿ ಇಟ್ಟುಕೊಂಡಿದ್ದರು. ತಪಾಸಣೆ ಮುಗಿದ ನಂತರ ಮಹಲ್ನಿಂದ ಹೊರಬರುತ್ತಿದ್ದ ವೇಳೆ ಅಧಿಕಾರಿಗಳನ್ನು ಅಡ್ಡಗಟ್ಟಿದ್ದ ಅನೂಜ್ ಹಾಗೂ ಕೆಲಸಗಾರ ಟ್ವಿಂಕಲ್ ಸ್ಯಾಮ್ಯುಯೆಲ್, ಬ್ಯಾಗ್ ಕಸಿದುಕೊಂಡು ಸ್ಥಳದಿಂದ ಹೊರಟು ಹೋಗಿದ್ದರು. ಈ ವೇಳೆ ಅಧಿಕಾರಿಗಳಿಗೂ ಬೆದರಿಕೆ ಒಡ್ಡಿದ್ದರು ಎಂದರು.
‘ದೂರು ದಾಖಲಾಗುತ್ತಿದ್ದಂತೆ ವ್ಯವಸ್ಥಾಪಕನನ್ನು ಬಂಧಿಸಿದ್ದೇವೆ. ಇನ್ನೊಬ್ಬ ತಲೆಮರೆಸಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
‘ಆರೋಪಿಗಳು ಸರ್ಕಾರಕ್ಕೆ ವಂಚನೆ ಮಾಡುತ್ತಿದ್ದ ಬಗ್ಗೆ ಮಾಹಿತಿ ತಿಳಿದು ತಪಾಸಣೆಗೆ ಹೋಗಿದ್ದೆವು. ಅವರು ದಾಖಲಾತಿಗಳಿದ್ದ ಬ್ಯಾಗ್ ಕದ್ದುಕೊಂಡು ಹೋಗಿ ಸಾಕ್ಷ್ಯ ನಾಶ ಮಾಡಲು ಯತ್ನಿಸಿದ್ದಾರೆ. ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ್ದಾರೆ’ ಎಂದು ಬಾಬು ದೂರಿನಲ್ಲಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.