ಬೆಂಗಳೂರು:‘ರಾಜ್ಯದಲ್ಲಿ ಶ್ರವಣದೋಷವುಳ್ಳವರನ್ನು ಪತ್ತೆ ಹಚ್ಚಲು ಸರ್ಕಾರ ಜಿಲ್ಲಾ ಮಟ್ಟದ ಸಮೀಕ್ಷೆ ಕೈಗೊಳ್ಳಲು ನಿರ್ಧರಿಸಿದೆ’ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದರು.
ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯು ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ವಿಶ್ವ ಕಿವಿ ಆರೈಕೆ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ಹೀಗೆ ಮೂರು ವಲಯಗಳನ್ನು ರೂಪಿಸಿಕೊಂಡು, ಶ್ರವಣದೋಷ ಇರುವವರನ್ನು ಪತ್ತೆ ಮಾಡಲು ಶೀಘ್ರದಲ್ಲೇ ಸಮಿತಿಯನ್ನು ರಚಿಸಲಾಗುವುದು’ ಎಂದು ಹೇಳಿದರು.
‘ಸಮೀಕ್ಷೆ ಪೂರ್ಣಗೊಂಡು ವರದಿ ಬಂದ ನಂತರ ಸರ್ಕಾರದ ಆರೋಗ್ಯ ಯೋಜನೆಗಳಡಿ ಅಗತ್ಯವಿರುವವರಿಗೆ ‘ಕ್ಲಾಕ್ಲಿಯರ್ ಇಂಪ್ಲ್ಯಾಂಟ್’ ಉಪಕರಣದ ಸೌಲಭ್ಯವನ್ನು ಕೂಡ ಒದಗಿಸಲಾಗುವುದು’ ಎಂದು ಹೇಳಿದರು.
‘ಬಡ ಹಾಗೂ ಮಧ್ಯಮವರ್ಗದವರಿಗೆ ₨ 12 ಲಕ್ಷ ರೂಪಾಯಿ ವೆಚ್ಚದ ‘ಕ್ಲಾಕ್ಲಿಯರ್ ಇಂಪ್ಲ್ಯಾಂಟ್’ ಬಲು ದುಬಾರಿಯಾಗುತ್ತದೆ. ಹಾಗಾಗಿ ಸರ್ಕಾರ ಕಾರ್ಪೋರೇಟ್ ಸಂಸ್ಥೆಗಳ ನೆರವಿನೊಂದಿಗೆ ಈ ಸೌಲಭ್ಯವನ್ನು ನೀಡಲು ಚಿಂತನೆ ನಡೆಸಿದೆ’ ಎಂದು ತಿಳಿಸಿದರು.
‘ಮುಂದಿನ ವರ್ಷದ ಕಿವಿ ಆರೈಕೆ ದಿನಾಚರಣೆಯಂದು ಎಲ್ಲಾ ಜಿಲ್ಲೆಗಳಲ್ಲೂ ಕಿವಿ ತಪಾಸಣಾ ಶಿಬಿರವನ್ನು ಕಡ್ಡಾಯವಾಗಿ ಆಯೋಜಿಸಲಾಗುತ್ತದೆ’ ಎಂದರು.
‘ಮೊಬೈಲ್ನ ಹೆಚ್ಚು ಬಳಕೆಯಿಂದಲೂ ಕಿವುಡುತನ ಆವರಿಸಿಕೊಳ್ಳುತ್ತದೆ. ಹಾಗಾಗಿ ಈ ಬಗ್ಗೆಯು ವ್ಯಾಪಕ ಅರಿವು ಮೂಡಿಸಬೇಕಿದೆ’ ಎಂದು ತಿಳಿಸಿದರು. ಶ್ರವಣ ದೋಷವಿರುವ ಮೂರು ಮಂದಿಗೆ ಕಾಲೇಜಿನ ಮೂಲಕ ಶ್ರವಣ ಸಾಧನವನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.