ADVERTISEMENT

ಶ್ರೀರಾಮುಲು ಮತ್ತೊಂದು ಯಾತ್ರೆ

​ಪ್ರಜಾವಾಣಿ ವಾರ್ತೆ
Published 13 ಜುಲೈ 2012, 18:30 IST
Last Updated 13 ಜುಲೈ 2012, 18:30 IST

ಬೆಂಗಳೂರು: ಬಿಎಸ್‌ಆರ್ ಕಾಂಗ್ರೆಸ್ ಸ್ಥಾಪಕ, ಪಕ್ಷೇತರ ಶಾಸಕ ಬಿ. ಶ್ರೀರಾಮುಲು ಅವರು ಇದೇ 29ರಿಂದ ಆಗಸ್ಟ್ 5ರವರೆಗೆ `ಸ್ವಾಭಿಮಾನಿ ಸಂಕಲ್ಪ ಯಾತ್ರೆ~ ಕೈಗೊಳ್ಳಲಿದ್ದಾರೆ. ಈ `ಯಾತ್ರೆ~ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಆರಂಭವಾಗಿ ರಾಮನಗರದಲ್ಲಿ ಕೊನೆಗೊಳ್ಳಲಿದೆ.

ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶ್ರೀರಾಮುಲು, `ಯಾತ್ರೆ 1,300 ಕಿ.ಮೀ. ಕ್ರಮಿಸಲಿದೆ, 45 ವಿಧಾನಸಭಾ ಕ್ಷೇತ್ರಗಳ ಮೂಲಕ ಹಾದುಹೋಗಲಿದೆ. ಕರಾವಳಿ, ಮಲೆನಾಡು ಭಾಗದ ಜನರನ್ನು ಕಾಡುತ್ತಿರುವ ಸಮಸ್ಯೆ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಈ ಯಾತ್ರೆ ಹಮ್ಮಿಕೊಂಡಿದ್ದೇನೆ~ ಎಂದರು.

ಕುಮಟಾ, ಸೊರಬ, ಶಿವಮೊಗ್ಗ, ಕಡೂರು, ಹಾಸನ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ಪುತ್ತೂರು, ಮಡಿಕೇರಿ, ಮೈಸೂರು, ಚಾಮರಾಜನಗರ, ಮಂಡ್ಯ, ಚನ್ನಪಟ್ಟಣ ಮೂಲಕ ಈ ಯಾತ್ರೆ ಸಾಗಲಿದೆ. ಮಂಗಳೂರು, ಮಡಿಕೇರಿ, ಮೈಸೂರು, ಚಾಮರಾಜನಗರ, ರಾಮನಗರಗಳಲ್ಲಿ ಸಾರ್ವಜನಿಕ ಸಮಾರಂಭ ಆಯೋಜಿಸಲಾಗುವುದು ಎಂದರು.

ಬಸವಕಲ್ಯಾಣದಿಂದ ಬೆಂಗಳೂರಿನವರೆಗೆ ನಡೆಸಿದ ಪಾದಯಾತ್ರೆಯ ಅನುಭವ, ಅಲ್ಲಿನ ಜನ ಅನುಭವಿಸುತ್ತಿರುವ ಸಂಕಷ್ಟ ಕುರಿತು ಪುಸ್ತಕ ಬರೆಯುವ ಚಿಂತನೆ ಇರುವುದಾಗಿ ಶ್ರೀರಾಮುಲು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.