ADVERTISEMENT

ಸಂಗೀತದಿಂದ ಮಾನಸಿಕ ಸಮತೋಲನ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2012, 19:25 IST
Last Updated 6 ಅಕ್ಟೋಬರ್ 2012, 19:25 IST

ಯಲಹಂಕ: `ತಾಂತ್ರಿಕ ಶಿಕ್ಷಣದ ಕಲಿಕೆಯ ಒತ್ತಡದ ನಡುವೆ ವಿದ್ಯಾರ್ಥಿಗಳು ಮಾನಸಿಕ ಸಮತೋಲನವನ್ನು ಕಾಪಾಡಿಕೊಳ್ಳಲು ಸಂಗೀತ ಕೇಳುವ ಅಭ್ಯಾಸ ರೂಢಿಸಿಕೊಳ್ಳಬೇಕು. ಅದರಿಂದ ಮನೋಲ್ಲಾಸದ ಅನುಭವವಾಗುತ್ತದೆ~ ಎಂದು ಮೃದಂಗ ವಿದ್ವಾನ್ ಅನೂರ್ ಅನಂತಶರ್ಮ ಅಭಿಪ್ರಾಯಪಟ್ಟರು.

ಹುಣಸಮಾರನಹಳ್ಳಿಯಲ್ಲಿರುವ ಸರ್.ಎಂ. ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನಲ್ಲಿ ಆಯೋಜಿಸಿದ್ದ `ಕಲಾಂಜಲಿ-2012~ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಂದುವರೆದು ಮಾತನಾಡಿದ ಅವರು `ವೃತ್ತಿ ಜೊತೆಗೆ ಪ್ರವೃತ್ತಿಯಾಗಿ ಕಲೆ, ಸಂಗೀತ, ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಪರಿಪೂರ್ಣ ವ್ಯಕ್ತಿತ್ವವನ್ನು ಬೆಳೆಸಿಕೊಂಡಂತಾಗುತ್ತದೆ~ ಎಂದು ಶರ್ಮ ಅಭಿಪ್ರಾಯಪಟ್ಟರು.

ಹಾಸ್ಯ ಭಾಷಣಕಾರ ಪ್ರೊ.ಎಂ.ಕೃಷ್ಣೇಗೌಡ ಮಾತನಾಡಿ, `ಕಲೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ಮೂಲಕ ಭಾವನಾತ್ಮಕ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು~ ಎಂದು ತಿಳಿಸಿದರು.

ಶ್ರೀ ಕೃಷ್ಣದೇವರಾಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎ.ಎಸ್.ಚಿನ್ನಸ್ವಾಮಿ ರಾಜು, ಧರ್ಮದರ್ಶಿ ವಿ.ಅನಂತರಾಜು, ನಿರ್ದೇಶಕ ವೀರೇಶ್ ಕೆ.ಬಸಲಳ್ಳಿ, ಪ್ರಾಂಶುಪಾಲರಾದ ಡಾ. ಎಂ.ಎಸ್.ಇಂದಿರಾ ಮೊದಲಾದವರು ಉಪಸ್ಥಿತರಿದ್ದರು.

ವಿಜೇತರಿಗೆ ಬಹುಮಾನ ವಿತರಣೆ: ಎರಡು ದಿನಗಳ ಕಲಾಂಜಲಿ ಕಾರ್ಯಕ್ರಮದಲ್ಲಿ ಸುಮಾರು 60 ತಾಂತ್ರಿಕ ಕಾಲೇಜುಗಳ 350ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.

ಒಟ್ಟು 33 ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಫ್ಯಾಷನ್ ಷೋ ಮತ್ತು ಗಲ್ಲಿ ಕ್ರಿಕೆಟ್ ಸ್ಪರ್ಧೆಗಳು ಈ ವರ್ಷದ ಪ್ರಮುಖ ಆಕರ್ಷಣೆಯಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ 2.50 ಲಕ್ಷ ರೂಪಾಯಿ ಮೊತ್ತದ ಬಹುಮಾನ ವಿತರಿಸಲಾಯಿತು.

ಸ್ಟಾರ್ ಆಫ್ ಕಲಾಂಜಲಿ ಪಟ್ಟವನ್ನು ಏಟ್ರಿಯಾ ತಾಂತ್ರಿಕ ಕಾಲೇಜಿನ ಮನೋಹರ್ ಪಟವರ್ಧನ್ ಮತ್ತು ಶ್ರೀ ಸಾಯಿ ತಾಂತ್ರಿಕ ಕಾಲೇಜಿನ ದೊಡ್ಡಬಸಪ್ಪ ಹಂಚಿಕೊಂಡರು.

ಅತ್ಯುತ್ತಮ ಪ್ರದರ್ಶನಕ್ಕಾಗಿ ಸಮಗ್ರ ಪ್ರಶಸ್ತಿ ಪಾರಿತೋಷಕವನ್ನು ಏಟ್ರಿಯಾ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.