ADVERTISEMENT

ಸಂಗೀತೋತ್ಸವಕ್ಕೆ 25 ಲಕ್ಷ ರೂಪಾಯಿ: ಸಿ.ಎಂ ಭರವಸೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಬೆಂಗಳೂರು: `ಶ್ರೀರಾಮ ಸೇವಾ ಮಂಡಳಿಯು ನಡೆಸುತ್ತಿರುವ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಮುಂದಿನ ವರ್ಷ 25 ಲಕ್ಷ ರೂಪಾಯಿ ಅನುದಾನ ನೀಡಲಾಗುವುದು~ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಭರವಸೆ ನೀಡಿದರು.

ಶ್ರೀರಾಮಸೇವಾ ಮಂಡಳಿಯು ನಗರದ ಕೋಟೆ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 74ನೇ ಶ್ರೀರಾಮನವಮಿ ರಾಷ್ಟ್ರೀಯ ಸಂಗೀತೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಸಂಗೀತ ಸರಸ್ವತಿಯೇ ಭುವಿಗೆ ಇಳಿದು ಬರುವಂತೆ ಕದ್ರಿ ಗೋಪಾಲನಾಥ್ ಅವರು ಸ್ಯಾಕ್ಸೋಫೋನ್ ನುಡಿಸುತ್ತಿದ್ದರೆ, ಅರೆಕ್ಷಣ ಮುಖ್ಯಮಂತ್ರಿ ಪದವಿ ಬದಿಗಿಟ್ಟು, ಆನಂದದಲ್ಲಿ ತೇಲಿದೆ~ ಎಂದು ಹರ್ಷ ವ್ಯಕ್ತಪಡಿಸಿದ ಅವರು, `ಸದಾ ಸ್ಪರ್ಧಾತ್ಮಕ ಮತ್ತು ಯಾಂತ್ರಿಕ ಬದುಕಿಗೆ ಒಡ್ಡಿಕೊಂಡಿರುವ ಮನುಷ್ಯನ ಜೀವನದಲ್ಲಿ ಸಂಗೀತವೆಂಬುದು ನೆಮ್ಮದಿಯನ್ನು ನೀಡುತ್ತದೆ. ದೇಶದ ಸಂಸ್ಕೃತಿಯನ್ನು ಸಾರುವ ಇಂತಹ ಉತ್ಸವಗಳು ಇನ್ನಷ್ಟು ನಡೆಯಬೇಕು~ ಎಂದು ಆಶಿಸಿದರು.

ADVERTISEMENT

`ಹಣ ಮತ್ತು ಅಧಿಕಾರ ಗಳಿಕೆಯ ಕುರಿತು ದುರಾಲೋಚನೆ ನಡೆಸುವ ಮನಸ್ಸನ್ನು ಹತೋಟಿಯಲ್ಲಿಡಲು ಸಂಗೀತವೆಂಬುದು ರಾಮಬಾಣ. ಸಂಗೀತ ಉತ್ಸವಗಳಲ್ಲಿ ವಿವಿಧ ಸಂಸ್ಕೃತಿಗಳ ಸಂಗಮವಾಗಿ ಕೇಳುಗರಿಗೆ ಹೊಸ ಹುರುಪು ನೀಡುತ್ತದೆ~ ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್, `ನಶಿಸುತ್ತಿರುವ ದೇಸಿ ಮತ್ತು ಶಾಸ್ತ್ರೀಯ ಸಂಗೀತವನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಸಂಗೀತೋತ್ಸವಗಳು ಸಹಕಾರಿಯಾಗಿದ್ದು, ಇದು ಹೀಗೆ ಮುಂದುವರಿಯಲಿ~ ಎಂದು ಆಶಿಸಿದರು.

ಕದ್ರಿ ಗೋಪಾಲನಾಥ್ ಮತ್ತು ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮಂಡಳಿಯ ಎ.ರವೀಂದ್ರ, ಮುನಿನಾರಾಯಣಸ್ವಾಮಿ ಇತರರು ಉಪಸ್ಥಿತರಿದ್ದರು. ಉತ್ಸವವು ಮೇ 6ರವರೆಗೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.