ಬೆಂಗಳೂರು: `ರೋಟರಿ ಸಂಸ್ಥಾಪಕ ಪಾಲ್ ಹ್ಯಾರಿಸ್ ಅವರು ತಮ್ಮನ್ನು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದರೂ ತಮ್ಮ ಕೆಲಸವನ್ನು ಬಿಟ್ಟಿರಲಿಲ್ಲ. ಈ ಗುಣವನ್ನು ಯುವಪೀಳಿಗೆ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು' ಎಂದು ರೋಟರಿ ಮಾಜಿ ಜಿಲ್ಲಾ ಗವರ್ನರ್ ಮಧುರ ಚತ್ರಪತಿ ಅವರು ಸಲಹೆ ನೀಡಿದರು.
ನಗರದ ರೋಟರಿ ಬೆಂಗಳೂರು ಆರ್ಚರ್ಡ್ಸ್ ಶುಕ್ರವಾರ ಏರ್ಪಡಿಸಿದ್ದ ಪಾಲ್ ಹ್ಯಾರಿಸ್ ಅವರ ಸ್ಮರಣಾರ್ಥ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪಾಲ್ ಹ್ಯಾರಿಸ್ ಅವರ ಜನನ, ವಿದ್ಯಾಭ್ಯಾಸ, ಬೆಳೆದು ಬಂದ ಹಾದಿ ಬಗ್ಗೆ ವಿವರಿಸಿದರು.
ಹ್ಯಾರಿಸ್ ಅವರು ಕಾನೂನು ವಿದ್ಯಾಭ್ಯಾಸ ಮುಗಿಸಿದ ನಂತರ 5 ವರ್ಷ ಹಣ ಸಂಪಾದನೆಗಾಗಿ ವಿವಿಧ ದೇಶಗಳನ್ನು ಸುತ್ತಾಡಿ, ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಮತ್ತೆ ಷಿಕಾಗೊಗೆ ಹಿಂತಿರುಗಿ ತಮ್ಮ ಅನುಭವಗಳಿಂದ ಕಲಿತ ಪಾಠದಿಂದಾಗಿ ವಕೀಲ ವೃತ್ತಿಯನ್ನು ಪ್ರಾರಂಭಿಸಿದರು.
ನಂತರ ಜನರ ಸೇವೆಗಾಗಿ ರೋಟರಿಯನ್ನು ಪ್ರಾರಂಭಿಸಿದರು. ವಕೀಲ ವೃತ್ತಿಯನ್ನು ಮುಂದುವರೆಸಿಕೊಂಡೇ ರೋಟರಿಯನ್ನು ಕಟ್ಟಿ ಬೆಳೆಸಿದರು. ಹೀಗೆ ಬೆಳೆದ ಸಂಸ್ಥೆ ಮೊದಲು ಕೆನಡಾದಲ್ಲಿ ತನ್ನ ಶಾಖೆಯನ್ನು ತೆರೆಯಿತು. ಈ ರೀತಿ ವಿಶ್ವದ ವಿವಿಧ ದೇಶಗಳಲ್ಲಿ ಜನರ ಸೇವೆಗಾಗಿ ಶಾಖೆಗಳನ್ನು ವಿಸ್ತರಿಸಿತು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೋಟರಿ ಬೆಂಗಳೂರು ಆರ್ಚರ್ಡ್ಸ್ ಅಧ್ಯಕ್ಷ ವಿ.ವಿಶ್ವನಾಥ್ ಅವರು, ರೋಟರಿ ಬೆಂಗಳೂರು 15 ವರ್ಷಗಳಿಂದ ಈ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಅಲ್ಲದೆ ಪೋಲಿಯೋ ನಿರ್ಮೂಲನೆ ಸೇರಿದಂತೆ ವೃದ್ಧರು, ಅಂಗವಿಕಲರ ಏಳಿಗೆಗಾಗಿ ಸಾಕಷ್ಟು ದುಡಿದಿದೆ ಎಂದರು. `ರೋಟರಿ ಬೆಂಗಳೂರು ಆರ್ಚ ರ್ಡ್ಸ್', `ರೋಟರಿ ಡೌನ್ ಟೌನ್' ಹಾಗೂ `ರೋಟರಿ ಜಂಕ್ಷನ್' ನ ಅಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.