ADVERTISEMENT

ಸರಣಿ ಸರಗಳವು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 20:04 IST
Last Updated 20 ಸೆಪ್ಟೆಂಬರ್ 2013, 20:04 IST

ಬೆಂಗಳೂರು: ನಗರದ ವಿದ್ಯಾರಣ್ಯಪುರ, ಬಾಣಸವಾಡಿ ಮತ್ತು ಮಹಾಲಕ್ಷ್ಮಿ ಲೇಔಟ್‌ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಬೆಳಿಗ್ಗೆ ಒಂದು ತಾಸಿನ ಅಂತರದಲ್ಲಿ ನಡೆದ ಸರಣಿ ಸರಗಳವು ಪ್ರಕರಣಗಳಲ್ಲಿ ದುಷ್ಕರ್ಮಿಗಳು ಮಹಿಳೆಯರ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನದ ಸರಗಳನ್ನು ದೋಚಿದ್ದಾರೆ.

ಬಿಇಎಲ್‌ ಲೇಔಟ್‌ ಎರಡನೇ ಹಂತದ ಒಂದನೇ ಅಡ್ಡರಸ್ತೆಯಲ್ಲಿ ಅಶ್ವಿನಿ ಎಂಬ ಮಹಿಳೆಯ ಸರವನ್ನು ದೋಚಲಾಗಿದೆ.
ಅವರು ಮನೆಯ ಮುಂದೆ ಕಸ ಗುಡಿಸುತ್ತಿದ್ದಾಗ ದುಷ್ಕರ್ಮಿಗಳಿಬ್ಬರು ಬೈಕ್‌ನಲ್ಲಿ ಬಂದು 75 ಗ್ರಾಂ ತೂಕದ ಎರಡು ಸರಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ವಿದ್ಯಾರಣ್ಯಪುರ ಠಾಣೆ ಯಲ್ಲಿ ದೂರು ದಾಖಲಾಗಿದೆ.

ಮತ್ತೊಂದು ಪ್ರಕರಣ: ಹೆಣ್ಣೂರು ಮುಖ್ಯರಸ್ತೆಯ ನಾಲ್ಕನೇ ಅಡ್ಡರಸ್ತೆ ಯಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಸರಗಳ್ಳರು ಸುಲೋಚನಾ ಎಂಬುವರ  95 ಗ್ರಾಂ ತೂಕದ ಎರಡು ಸರಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಸುಲೋಚನಾ ಅವರು ಮನೆಯ ಮುಂದೆ ರಂಗೋಲಿ ಹಾಕುತ್ತಿದ್ದಾಗ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಹಾಲಕ್ಷ್ಮಿಲೇಔಟ್‌ ಎರಡನೇ ಹಂತದ ಒಂಬತ್ತನೇ ‘ಎ’ ಅಡ್ಡರಸ್ತೆಯಲ್ಲಿ ಗಂಗಮ್ಮ ಎಂಬುವರ 60 ಗ್ರಾಂ ತೂಕದ ಸರವನ್ನು ದೋಚಲಾಗಿದೆ. ಅವರು ಮನೆಯ ಮುಂದೆ ನಿಂತಿದ್ದಾಗ ದುಷ್ಕರ್ಮಿ ಗಳಿಬ್ಬರು ಬೈಕ್‌ನಲ್ಲಿ ಬಂದು ಸರ ದೋಚಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬೆಳಿಗ್ಗೆ 6.30ರಿಂದ 7.30ರ ಒಳಗೆ ಮೂರು ಕಡೆ ಸರಗಳವು ಪ್ರಕರಣಗಳು ನಡೆದಿವೆ. ದುಷ್ಕರ್ಮಿಗಳು ಮೂರು ಕಡೆಯೂ ಒಂದೇ ರೀತಿಯಲ್ಲಿ ಕೃತ್ಯ ಎಸಗಿದ್ದಾರೆ. ಸರಗಳ್ಳರು ಕಪ್ಪು ಬಣ್ಣದ ಬೈಕ್‌ನಲ್ಲಿ ಬಂದಿದ್ದರು ಎಂದು ದೂರುದಾರರು ವಿಚಾರಣೆ ವೇಳೆ ಹೇಳಿದ್ದಾರೆ. ಈ ಅಂಶಗಳನ್ನು ಗಮನಿ ಸಿದರೆ ಒಂದೇ ತಂಡದ ಸದಸ್ಯರು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ' ಎಂದು ಪೊಲೀಸರು ತಿಳಿಸಿದ್ದಾರೆ.

ಸರಗಳವು ಪ್ರಕರಣಗಳು ಹೆಚ್ಚುತ್ತಿರುವುದರಿಂದ ಮಹಿಳೆ ಯರು ಆತಂಕಗೊಂಡಿದ್ದು, ಪೊಲೀಸ ರ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಸರಿಯಾಗಿ ಗಸ್ತು ಮಾಡದ ಕಾರಣದಿಂದಲೇ ಸರಗಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ರಸ್ತೆಯಲ್ಲಿ ನಿರ್ಭೀತಿಯಿಂದ ಓಡಾಡುವುದೇ ದುಸ್ತರವಾಗಿದೆ ಎಂದು ಮಹಿಳೆಯರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.