ADVERTISEMENT

ಸರ್ಕಾರದ ಮೇಲೆ ಮಠಗಳ ನಿಯಂತ್ರಣ ಅಪಾಯಕಾರಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 19:30 IST
Last Updated 19 ಜೂನ್ 2012, 19:30 IST

 ಬೆಂಗಳೂರು: `ಮಠ ಮಂದಿರಗಳು ಸರ್ಕಾರದ ಮೇಲೆ ನಿಯಂತ್ರಣ ಹೇರುವ ಮೂಲಕ ಪ್ರಜಾಪ್ರಭುತ್ವನ್ನು ಕಗ್ಗೊಲೆ ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಮಾನತೆಯನ್ನು ಪ್ರತಿಪಾದಿಸಿದ ಅಂಬೇಡ್ಕರ್ ಅಂತಹವರ ವ್ಯಕ್ತಿತ್ವದವರು ರಾಜಕೀಯ ನಾಯಕರಾಗಬೇಕು~ ಎಂದು ಚಿಂತಕ ಜಿ.ಕೆ.ಗೋವಿಂದರಾವ್ ಅಭಿಪ್ರಾಯಪಟ್ಟರು.

ಕೆಎಸ್‌ಟಿಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ನೌಕರರ ವೆಲ್‌ಫೇರ್ ಅಸೋಸಿಯೇಷನ್ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್ . ಅಂಬೇಡ್ಕರ್ ಅವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.

`ಸ್ವಾತಂತ್ಯ ಮತ್ತು ಸಮಾನತೆಗಳ ಚಳವಳಿಗಳು ಹುಟ್ಟಿಕೊಂಡಾಗಲೇ ಅದಕ್ಕೆ ವಿರುದ್ದವಾಗಿ ಧರ್ಮ ಮತ್ತು ಶಿಸ್ತಿನ ಹೆಸರಿನಲ್ಲಿ ಆರ್‌ಎಸ್‌ಎಸ್ ರೂಪ ಪಡೆಯಿತು. ಇಂತಹ ಸಂಘಟನೆಗಳು ಸರ್ಕಾರವನ್ನು ಆಳುತ್ತಿರುವುರುವುದು ಪ್ರಜಾಪ್ರಭುತ್ವದ ಅಣಕ~ ಎಂದು ವ್ಯಂಗ್ಯವಾಡಿದರು.  `ಅಂಬೇಡ್ಕರ್ ಚಿಂತನೆಗಳಿಗೆ ಕೇವಲ ತತ್ವ ಸಿದ್ದಾಂತಗಳ ಚೌಕಟ್ಟು ಒದಗಿಸದೇ ಜನ ಜೀವನದ ಭಾಗವಾಗಬೇಕು. ಹಿಂದುಳಿದ ಜನಾಂಗದವರು ಯಾವುದೇ ಕೀಳರಿಮೆಯಿಲ್ಲದೇ ಮೀಸಲಾತಿಯನ್ನು ಪಡೆಯುವಂತಾಗಬೇಕು~ ಎಂದು ಆಶಿಸಿದರು.

ಸಚಿವ ಎ.ನಾರಾಯಣಸ್ವಾಮಿ ಅವರು  ಮಾತನಾಡಿ, `ದಲಿತರಿಗೆ ಮೀಸಲಾತಿ ಸಮರ್ಪಕವಾಗಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ವಿಧಾನಸೌಧದಲ್ಲಿರುವ ಪ್ರಧಾನ ಕಾರ್ಯದರ್ಶಿಗಳಲ್ಲಿ ಎಷ್ಟು ಜನ ದಲಿತರಿದ್ದಾರೆ. ಕೈಗಾರಿಕೆ ಸ್ಥಾಪನೆ ಸೇರಿದಂತೆ ಎಲ್ಲ ಪ್ರಮುಖ ಸ್ಥಾನಗಳಿಗೆ ದಲಿತರು ಅವಕಾಶ ಪಡೆಯುತ್ತಿದ್ದಾರೆಯೇ?~ ಎಂದು ಪ್ರಶ್ನಿಸಿದರು.

ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಕೆ.ಎಸ್.ಟಿ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ಸಿ.ಡಿ.ದೇವಯ್ಯ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಜಿ.ಸತ್ಯವತಿ, ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಆಯುಕ್ತ ಕೆ.ಸಿ. ಶ್ರೀರಾಮಯ್ಯ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.