ADVERTISEMENT

ಸವಾಲುಗಳೊಂದಿಗೆ ಸೆಣಸಲು ನಾವು ಸಿದ್ಧ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2011, 20:00 IST
Last Updated 12 ಫೆಬ್ರುವರಿ 2011, 20:00 IST

ಯಲಹಂಕ ವಾಯುನೆಲೆ: ‘ಏಕಕಾಲದಲ್ಲಿ ಆರು ದುರ್ಘಟನೆಗಳು ಸಂಭವಿಸಿದರೂ, 600 ಮಂದಿ ಅಪಾಯದಲ್ಲಿ ಸಿಲುಕಿದರೂ ಅವರ ರಕ್ಷಣೆಗೆ ಧಾವಿಸುವ ಶಕ್ತಿ ನಮ್ಮ ತಂಡಕ್ಕೆ ಇದೆ.’

- ಇದು ಬುಧವಾರದಿಂದ ಇಲ್ಲಿ ನಡೆಯುತ್ತಿರುವ ಏರೊ ಇಂಡಿಯಾ-2011 ವೈಮಾನಿಕ ಪ್ರದರ್ಶನ ಕಾರ್ಯಕ್ರಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿಪತ್ತು ನಿರ್ವಹಣಾ ತಂಡದ ನೇತೃತ್ವ ವಹಿಸಿರುವ ಕೆ.ಕೆ. ಪ್ರದೀಪ್ ಅವರ ವಿಶ್ವಾಸದ ನುಡಿ.

ಇದೇ ಮೊದಲ ಬಾರಿಗೆ ಎಂಬಂತೆ, ಪ್ರದೀಪ್ ನೇತೃತ್ವದ ವಿಪತ್ತು ನಿರ್ವಹಣಾ ತಂಡ ಭಯೋತ್ಪಾದಕರ ದಾಳಿಯನ್ನೂ ಎದುರಿಸುವ ಸಾಮರ್ಥ್ಯ ಹೊಂದಿದೆ. ವಿಪತ್ತು ನಿರ್ವಹಣೆಯಲ್ಲಿ ವಿಶೇಷ ಅನುಭವ ಪಡೆದಿರುವ ‘ನ್ಯಾಷನಲ್ ಡಿಸಾಸ್ಟರ್ ರೆಸ್ಪಾನ್ಸ್ ಫೋರ್ಸ್’ನ (ಎನ್‌ಡಿಆರ್‌ಎಫ್) ಸಹಾಯ ಪಡೆದಿರುವ ವಿಪತ್ತು ನಿರ್ವಹಣಾ ತಂಡಕ್ಕೆ ರಾಸಾಯನಿಕ ಅಥವಾ ಜೈವಿಕ ದಾಳಿಯನ್ನೂ ಎದುರಿಸುವ ಸಾಮರ್ಥ್ಯ ಇದೆ.

ADVERTISEMENT

ವೈಮಾನಿಕ ಪ್ರದರ್ಶನದ ಆರಂಭದ ದಿನವಾದ ಫೆಬ್ರವರಿ 9ರಿಂದ ತನ್ನ ಕಾರ್ಯ ಆರಂಭಿಸಿರುವ ವಿಪತ್ತು ನಿರ್ವಹಣಾ ತಂಡ ಇದುವರೆಗೆ ಹತ್ತಕ್ಕೂ ಹೆಚ್ಚು ಬೆಂಕಿ ಅವಗಢಗಳನ್ನು (ಎಲ್ಲವೂ ವಾಯುನೆಲೆಯ ಹೊರಭಾಗದಲ್ಲಿ ಸಂಭವಿಸಿದ್ದು) ಯಶಸ್ವಿಯಾಗಿ ಎದುರಿಸಿದೆ. 600 ಮಂದಿ ಸದಸ್ಯರನ್ನು ಹೊಂದಿರುವ ಈ ತಂಡ 15 ಇಲಾಖೆಗಳ ಸದಸ್ಯರನ್ನು ಹೊಂದಿದೆ.

ಪೊಲೀಸ್, ಅಗ್ನಿಶಾಮಕ ದಳದ ಸದಸ್ಯರನ್ನಲ್ಲದೆ ಈ ತಂಡದಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿಯೂ (ಆರ್‌ಟಿಒ) ಇದ್ದಾರೆ. ವಾಯುನೆಲೆಯ 8 ಮತ್ತು 9ನೇ ಪ್ರವೇಶದ್ವಾರ, ಗಂಟಗಾನಹಳ್ಳಿ, ಚಿಕ್ಕಜಾಲ ಪೊಲೀಸ್ ಠಾಣೆ ಮತ್ತು ವಾಯುನೆಲೆಯ ಹೊರಗಿರುವ ನಿಯಂತ್ರಣ ಕೊಠಡಿ ಸೇರಿದಂತೆ ಒಟ್ಟು ಐದು ಕಡೆ ಈ ತಂಡದ ತುಕಡಿಗಳು ಇವೆ. ಎಲ್ಲ ಕಡೆಗಳಿಂದ ಬರುವ ಮಾಹಿತಿಯನ್ನು ಒಂದೇ ನಿಯಂತ್ರಣ ಕೊಠಡಿಯಲ್ಲಿ ಸಂಸ್ಕರಿಸಿ, ವಿಪತ್ತಿನ ಸಂದರ್ಭದಲ್ಲಿ ಕಾರ್ಯಾಚರಣೆ ಆರಂಭಿಸಲು ಸಂಬಂಧಪಟ್ಟ ತಂಡಕ್ಕೆ ಸೂಚನೆ ನೀಡಲಾಗುತ್ತದೆ.

ದುರ್ಘಟನೆ ಸಂಭವಿಸಿದಲ್ಲಿ, ತಂಡಕ್ಕೆ ಸೂಚನೆ ಸಿಕ್ಕ ಮೂರೇ ನಿಮಿಷಗಳಲ್ಲಿ ವಿಪತ್ತು ನಿರ್ವಹಣಾ ಕಾರ್ಯಾಚರಣೆ ಆರಂಭವಾಗಿರುತ್ತದೆ. ಅಲ್ಲದೆ, ದುರ್ಘಟನೆಯ ಸಂದರ್ಭದಲ್ಲಿ ಆಂಬುಲೆನ್ಸ್‌ಗಳು ಸ್ಥಳಕ್ಕೆ ಧಾವಿಸಲು ಅನುಕೂಲ ಆಗುವಂತೆ ಪ್ರತ್ಯೇಕ ಮಾರ್ಗ ಕೂಡ ಇದೆ. 11 ಸರ್ಕಾರಿ ಆಸ್ಪತ್ರೆಗಳು ಮತ್ತು 30 ಖಾಸಗಿ ಆಸ್ಪತ್ರೆಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಒಟ್ಟು 1,200 ಹಾಸಿಗೆಗಳನ್ನು ಮೀಸಲಿಡಲಾಗಿದೆ ಎಂದು ಪ್ರದೀಪ್  ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.