ನೆಲಮಂಗಲ: ಬೆಂಗಳೂರಿನ ಹೊರವಲಯದಲ್ಲಿರುವ ದಾಬಸ್ಪೇಟೆ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಪಟ್ಟಣ. ಇದಕ್ಕೆ ಸಾಕ್ಷಿ ಎಂಬಂತೆ ಪೀಣ್ಯ ಕೈಗಾರಿಕಾ ಪ್ರದೇಶ ದಾಬಸ್ಪೇಟೆಗೆ ಸ್ಥಳಾಂತರವಾಗುತ್ತಿದೆ. ಈಗಾಗಲೆ ಹಲವು ರಾಷ್ಟ್ರೀಯ ಮತ್ತು ಬಹುರಾಷ್ಟ್ರೀಯ ಕಾರ್ಖಾನೆಗಳು ತಲೆ ಎತ್ತಿವೆ. ದಕ್ಷಿಣ ಕಾಶಿ ಎಂದೆ ಪ್ರಖ್ಯಾತವಾಗಿರುವ ಶಿವಗಂಗೆಯು ದಾಬಸ್ಪೇಟೆ ಸಮೀಪದಲ್ಲೇ ಇದೆ. ದಾಬಸ್ಪೇಟೆಗೆ ಕಪ್ಪು ಚುಕ್ಕೆ ಎಂಬಂತೆ ಕಸದ ರಾಶಿ ಗಬ್ಬು ನಾರುತ್ತಿದೆ.
ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ರಸ್ತೆಯ ಕೆಳಗೆ ಸ್ಥಳೀಯರ ಓಡಾಟಕ್ಕೆ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆಯ ಪಕ್ಕದಲ್ಲೆಲ್ಲ ತ್ಯಾಜ್ಯವಸ್ತುಗಳು ತುಂಬಿಕೊಂಡು ದುರ್ನಾತ ಬೀರುತ್ತಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರು ತುಂಬಿಕೊಂಡಿದೆ. ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಬಂದಿದೆ.
`ರಸ್ತೆಯ ಪಕ್ಕದಲ್ಲಿರುವ ಬಾರ್, ಅಂಗಡಿಗಳ ಮಾಲೀಕರು ತ್ಯಾಜ್ಯ ವಸ್ತುಗಳನ್ನು ಸೇತುವೆ ಕೆಳಗೆ ತಂದು ಎಸೆದಿದ್ದಾರೆ. ಈಗಾಗಲೆ ಡೆಂಗೆ, ಚಿಕೂನ್ ಗುನ್ಯ, ಮಲೇರಿಯಾ ದಂತಹ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದು, ನಮಗೂ ರೋಗ ಹರಡುವ ಭೀತಿ ಎದುರಾಗಿದೆ' ಎಂದು ಸ್ಥಳೀಯ ನಿವಾಸಿ ನಾಗಲಕ್ಷ್ಮಿ ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.