ADVERTISEMENT

ಸಾಫ್ಟ್‌ವೇರ್ ಎಂಜಿನಿಯರ್ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 20:27 IST
Last Updated 10 ಏಪ್ರಿಲ್ 2013, 20:27 IST

ಬೆಂಗಳೂರು: ನಗರದ ಹಳೇ ವಿಮಾನ ನಿಲ್ದಾಣ ರಸ್ತೆಯ ಶಾಂತಿನಿಕೇತನ ಲೇಔಟ್‌ನಲ್ಲಿ ಮನೋಜ್‌ಕುಮಾರ್ (36) ಎಂಬ ಸಾಫ್ಟ್‌ವೇರ್ ಎಂಜಿನಿಯರ್ ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಸಾಫ್ಟ್‌ವೇರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮನೋಜ್‌ಕುಮಾರ್, ಶಾಂತಿನಿಕೇತನ ಲೇಔಟ್‌ನಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದರು. ಅವರು ಪೇಯಿಂಗ್ ಗೆಸ್ಟ್ ಕಟ್ಟಡದ ತಮ್ಮ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಆರ್.ಟಿ.ನಗರದ ಪ್ರಮೀಳಾ ಎಂಬುವರನ್ನು ಮನೋಜ್, ಎರಡೂವರೆ ವರ್ಷದ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಒಂದು ವರ್ಷದ ಗಂಡು ಮಗುವಿದೆ. ದಂಪತಿ ನಡುವೆ ಆರು ತಿಂಗಳ ಹಿಂದೆ ಜಗಳವಾಗಿತ್ತು. ಈ ಕಾರಣಕ್ಕಾಗಿ ಪತ್ನಿ ಮತ್ತು ಮಗುವಿನಿಂದ ದೂರವಾಗಿದ್ದ ಮನೋಜ್, ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಪ್ರಮೀಳಾ ತಮ್ಮ ತಾಯಿ ದೇವಿ ಅವರೊಂದಿಗೆ ಆರ್.ಟಿ.ನಗರದಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

`ಪ್ರಮೀಳಾ ಮತ್ತು ದೇವಿ ಅವರು ಹಣಕಾಸಿನ ವಿಚಾರವಾಗಿ ತಮ್ಮನ ಜತೆ ಜಗಳವಾಡುತ್ತಿದ್ದರು. ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿಯೂ ಅವರು ಆತನಿಗೆ ಹೆದರಿಸುತ್ತಿದ್ದರು. ಅಲ್ಲದೇ, ಅವರಿಬ್ಬರು ಸೋಮವಾರ ಪೇಯಿಂಗ್ ಗೆಸ್ಟ್ ಕಟ್ಟಡಕ್ಕೆ ಬಂದು ತಮ್ಮನೊಂದಿಗೆ ಜಗಳವಾಡಿದ್ದರು. ಇದರಿಂದ ಬೇಸರಗೊಂಡು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತರ ಅಣ್ಣ ಜಿತೇಂದ್ರಕುಮಾರ್ ದೂರು ಕೊಟ್ಟಿದ್ದಾರೆ. ಪ್ರಮೀಳಾ ಅವರನ್ನು ಬಂಧಿಸಲಾಗಿದೆ' ಎಂದು ಎಚ್‌ಎಎಲ್  ಪೊಲೀಸರು ಮಾಹಿತಿ ನೀಡಿದ್ದಾರೆ.

ಖಾಸಗಿ ಕಂಪೆನಿ ಉದ್ಯೋಗಿ ಆತ್ಮಹತ್ಯೆ:  ಬಾಗಲಗುಂಟೆಯಲ್ಲಿ ಮಂಗಳವಾರ ಉಮೇಶ್ (27) ಎಂಬುವರು ನೇಣು ಹಾಕಿಕೊಂಡಿದ್ದು, ಆಡುಗೋಡಿ ಬಳಿಯ ರಾಜೇಂದ್ರ ನಗರದಲ್ಲಿ ಸೆಲ್ವಂ (45) ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಮೇಶ್, ಹೆಸರಘಟ್ಟ ರಸ್ತೆಯಲ್ಲಿನ ಖಾಸಗಿ ಆಸ್ಪತ್ರೆಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಉದ್ಯೋಗಿಯಾಗಿದ್ದರು. ಪತ್ನಿ ನಾಗರತ್ನ ಮತ್ತು ಮಗುವಿನೊಂದಿಗೆ ಬಾಗಲಗುಂಟೆ 31ನೇ ಅಡ್ಡರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಅವರು, ಹಿಂದೆಯೂ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಪೊಲೀಸರು ಹೇಳಿದ್ದಾರೆ. ನಾಗರತ್ನ ಅವರು ಮಗುವಿನೊಂದಿಗೆ ಸಂಬಂಧಿಕರ ಮದುವೆಗೆ ಹೋದಾಗ ಉಮೇಶ್ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.