ADVERTISEMENT

ಸಾಮಾಜಿಕ ಜವಾಬ್ದಾರಿ ರೂಢಿಸಿಕೊಳ್ಳಿ

ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2016, 19:30 IST
Last Updated 12 ನವೆಂಬರ್ 2016, 19:30 IST
ನ್ಯಾಯಾಧೀಶರಾದ (ಎಡದಿಂದ) ಬಿ. ನಂದಕುಮಾರ್‌, ಡಾ. ಎಚ್.ಬಿ. ಪ್ರಭಾಕರ ಶಾಸ್ತ್ರಿ, ಡಾ. ಎ. ಗುರುಮೂರ್ತಿ ಅವರನ್ನು ಎನ್. ಸಂತೋಷ್‌ ಹೆಗ್ಡೆ ಸನ್ಮಾನಿಸಿದರು. ಚಿತ್ರದಲ್ಲಿ(ನಿಂತವರು–ಎಡದಿಂದ) ಕಾನೂನು ಕಾಲೇಜಿನ ಮುಖ್ಯಸ್ಥ ಡಾ.ವಿ. ಸುರೇಶ್‌, ಪ್ರೊ. ಬಿ. ತಿಮ್ಮೇಗೌಡ, ಡಾ. ವಿ.ಬಿ. ಕುಟಿನೊ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಎಫ್. ಗೌತಮ್ ಚಂದ್ ಇದ್ದಾರೆ	ಪ್ರಜಾವಾಣಿ ಚಿತ್ರ
ನ್ಯಾಯಾಧೀಶರಾದ (ಎಡದಿಂದ) ಬಿ. ನಂದಕುಮಾರ್‌, ಡಾ. ಎಚ್.ಬಿ. ಪ್ರಭಾಕರ ಶಾಸ್ತ್ರಿ, ಡಾ. ಎ. ಗುರುಮೂರ್ತಿ ಅವರನ್ನು ಎನ್. ಸಂತೋಷ್‌ ಹೆಗ್ಡೆ ಸನ್ಮಾನಿಸಿದರು. ಚಿತ್ರದಲ್ಲಿ(ನಿಂತವರು–ಎಡದಿಂದ) ಕಾನೂನು ಕಾಲೇಜಿನ ಮುಖ್ಯಸ್ಥ ಡಾ.ವಿ. ಸುರೇಶ್‌, ಪ್ರೊ. ಬಿ. ತಿಮ್ಮೇಗೌಡ, ಡಾ. ವಿ.ಬಿ. ಕುಟಿನೊ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಸ್.ಎಫ್. ಗೌತಮ್ ಚಂದ್ ಇದ್ದಾರೆ ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ವೃತ್ತಿಯಲ್ಲಿರುವ ಪ್ರತಿಯೊಬ್ಬರು ಸಾಮಾಜಿಕ ಜವಾಬ್ದಾರಿಯನ್ನು ರೂಢಿಸಿಕೊಳ್ಳಬೇಕು’ ಎಂದು ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್‌ ಹೆಗ್ಡೆ ಹೇಳಿದರು.

ನಗರದಲ್ಲಿ ಶನಿವಾರ ನಡೆದ ವಿಶ್ವವಿದ್ಯಾಲಯ ಕಾನೂನು ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನ್ಯಾಯಾಂಗದ ಅಧಿಕಾರದಲ್ಲಿ ಇರುವವರನ್ನು ಕಂಡು ಜನ ಹೆದರುತ್ತಾರೆ. ಅವರನ್ನು ಗತ್ತಿನಿಂದ ಇನ್ನಷ್ಟು ಹೆದರಿಸಬಾರದು. ಬದಲಿಗೆ ಅವರೊಳಗೆ ಒಬ್ಬನಂತೆ ವರ್ತಿಸುತ್ತ, ಆಗಬಹುದಾದ ಸಹಾಯ ಮಾಡಬೇಕು’ ಎಂದರು.

‘ಲೋಕಾಯುಕ್ತ ಸಂಸ್ಥೆಗೆ ಬರುವ ಮುನ್ನ ನಾನು ಕೂಪ ಮಂಡೂಕದಂತಿದ್ದೆ. ಅಲ್ಲಿ ಅಧಿಕಾರ ವಹಿಸಿಕೊಂಡ ನಂತರ ಅನೇಕ ಅನಿರೀಕ್ಷಿತ ಅನುಭವಗಳು ದೊರೆತವು. ಟೈ–ಸೂಟುಗಳನ್ನು ಧರಿಸುವುದನ್ನು ನಿಲ್ಲಿಸಿದ ನಂತರವೇ  ಸಾಮಾನ್ಯ ಜನ ನಿರ್ಭೀತಿಯಿಂದ ಮಾತನಾಡಲು ಆರಂಭಿಸಿದರು’ ಎಂದು ಅವರು ಹೇಳಿದರು.

‘ಇಂದಿನ ಜನನಾಯಕರು ತಮ್ಮನ್ನು ಸಾರ್ವಜನಿಕ ಸೇವಕರೆಂದು ತಿಳಿದಿಲ್ಲ. ಅಣ್ಣ ಹಜಾರೆಯವರ ನೇತೃತ್ವದಲ್ಲಿ ಜನಲೋಕಪಾಲ ಮಸೂದೆಯ ಕರಡನ್ನು ಸಿದ್ಧಪಡಿಸಿ ಸಂಸದರೊಬ್ಬರಿಗೆ ಕಳುಹಿಸಿದ್ದೆವು. ಅವರು ಮಸೂದೆ ರಚಿಸಲು ನೀವ್ಯಾರು ಎಂದು ಪ್ರಶ್ನಿಸಿದ್ದರು. ಆ ಕ್ಷಣಕ್ಕೆ ಅವರಿಗೆ ಜನರಿಂದ ಆಯ್ಕೆ ಆಗಿರುವ ವಿಷಯ ಮರೆತು ಹೋಗಿತ್ತೇನೊ’ ಎಂದು ಹೇಳಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಡಾ.ವಿ.ಬಿ. ಕುಟಿನೊ ಮಾತನಾಡಿ,‘ಹಳೆ ವಿದ್ಯಾರ್ಥಿಗಳ ಸಂಘಗಳ ರಚನೆಯ ಉದ್ದೇಶ ವರ್ಷಕ್ಕೊಮ್ಮೆ ಸೇರಿ ಉಪಹಾರ–ಊಟ ಮಾಡುವುದಾಗಬಾರದು. ಬದಲಿಗೆ ಅಧ್ಯಯನ ಮಾಡಿದ ಸಂಸ್ಥೆಯ ಸ್ಥಿತಿಗತಿ ಸುಧಾರಿಸಲು ಮಾಡಬೇಕಾದ ಕೆಲಸಗಳ ಬಗ್ಗೆ ಚರ್ಚಿಸಬೇಕು’ ಎಂದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ. ತಿಮ್ಮೇಗೌಡ ಮಾತನಾಡಿ,‘ಕಾನೂನು ಕಾಲೇಜಿಗೆ 1,500 ಸಭಿಕರು ಕೂರಬಹುದಾದ ಸಭಾಂಗಣ ಮತ್ತು ವಿದ್ಯಾರ್ಥಿ ನಿಲಯ ನಿರ್ಮಿಸಲು ಯೋಜಿಸಲಾಗಿದೆ. ಹಾಗೆಯೇ ಸ್ವಾಯತ್ತ ಸ್ಥಾನಮಾನ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.