ಬೆಂಗಳೂರು: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಕುಟುಕು ಕಾರ್ಯಾಚರಣೆ ನಡೆಸಲು ತೆರಳಿದ್ದ ನ್ಯೂಸ್ 9 ಆಂಗ್ಲ ಸುದ್ದಿವಾಹಿನಿಯ ವರದಿಗಾರರನ್ನು ಬಂಧಿಸಿದ ಮತ್ತು ಇಡೀ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ‘ನ್ಯಾಯಕ್ಕಾಗಿ ನಾವು’ ಸಂಘಟನೆಯು ಆಗ್ರಹಿಸಿದೆ.
ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಇಂದೂಧರ ಹೊನ್ನಾಪುರ, ‘ಪ್ರಕರಣದಲ್ಲಿ ಸರ್ಕಾರವು ಬೇಜವಾಬ್ದಾರಿಯಾಗಿ ವರ್ತಿಸದೆ, ನಿಷ್ಪಕ್ಷಪಾತವಾಗಿ ಪ್ರಕರಣದ ತನಿಖೆ ನಡೆಸಬೇಕು. ಇಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅಥವಾ ನ್ಯೂಸ್ 9 ಆಂಗ್ಲ ಸುದ್ದಿವಾಹಿನಿಯ ತಪ್ಪಿದೆಯೇ ಎಂಬುದರ ಕುರಿತು ಸಮಗ್ರ ತನಿಖೆಯಾಗಬೇಕು’ ಎಂದರು.
‘ನ್ಯೂಸ್ 9 ಸುದ್ದಿವಾಹಿನಿಯ ಮುಖ್ಯಸ್ಥ ಮಹೇಶ್ ಮಿಶ್ರಾ ಅವರು ತಲೆಮರೆಸಿಕೊಳ್ಳುವ ಅಗತ್ಯವಿಲ್ಲ. ಅವರು ನ್ಯಾಯವಾಗಿ, ಸಮಾಜದ ಒಳಿತಿಗಾಗಿ ಕುಟುಕು ಕಾರ್ಯಾಚರಣೆ , ಅದರ ಕುರಿತು ಸಮರ್ಥನೆಯನ್ನು ನೀಡಲಿ. ಪ್ರಕರಣವನ್ನು ಧೈರ್ಯದಿಂದ ಎದುರಿಸಲಿ’ ಎಂದರು.
ಸಂಘಟನೆಯ ಕಾರ್ಯಾಧ್ಯಕ್ಷ ಅಗ್ನಿ ಶ್ರೀಧರ್ ಮಾತನಾಡಿ, ‘ನ್ಯೂಸ್ 9 ಸುದ್ದಿವಾಹಿನಿಯ ಮುಖ್ಯಸ್ಥ ತಲೆಮರೆಸಿಕೊಂಡಿರುವುದು ಅನೇಕ ಊಹಾ ಪೋಹಗಳಿಗೆ ಕಾರಣವಾಗಿದೆ. ಡಿ.ಕೆ.ಶಿವಕುಮಾರ್ ಅವರಲ್ಲಿ ₨ 5 ಕೋಟಿ ಹಣವನ್ನು ಕೇಳಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಇದರಿಂದ, ಒಟ್ಟಾರೆ ಪ್ರಕರಣದ ಸತ್ಯಾಂಶವು ಜನತೆಯ ಮುಂದೆ ಬರಬೇಕಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.