ಬೆಂಗಳೂರು: `ನಮ್ಮ ಮೆಟ್ರೊ' ಯೋಜನೆಯ ಎರಡನೇ ಹಂತದಲ್ಲಿ ಬೈಯಪ್ಪನಹಳ್ಳಿ- ವೈಟ್ಫೀಲ್ಡ್ ನಡುವಿನ ಮಾರ್ಗವನ್ನು ಎತ್ತರಿಸಿದ ಮಾರ್ಗದ ಬದಲು ಸುರಂಗಮಾರ್ಗದ ಮೂಲಕ ನಡೆಸಬೇಕು ಎಂದು `ವೈಟ್ಫೀಲ್ಡ್ ಏರಿಯಾ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಸೋಸಿಯೇಷನ್' ಒತ್ತಾಯಿಸಿದೆ.
ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್ ಅಧ್ಯಕ್ಷ ಬಿ.ಜಿ.ಕೋದಂಡರಾಮ್ ಅವರು, `ನಮ್ಮ ಮೆಟ್ರೊ ಮೊದಲ ಹಂತದ ಯೋಜನೆಯೇ ಸಾಕಷ್ಟು ವಿಳಂಬವಾಗಿದ್ದು, ನಗರದ ಜನರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. 2020ರ ನಂತರವೇ ಎರಡನೇ ಹಂತದ ಯೋಜನೆ ಸೇವೆಗೆ ದೊರಕಲಿದೆ. ಆ ವೇಳೆಗೆ ಸಂಚಾರ ದಟ್ಟಣೆ ಇನ್ನಷ್ಟು ಹೆಚ್ಚಲಿದೆ. ಈ ನಿಟ್ಟಿನಲ್ಲಿ ಎರಡನೇ ಹಂತದ ಯೋಜನೆಯನ್ನ ಸುರಂಗ ಮಾರ್ಗದ ಮೂಲಕ ಅನುಷ್ಠಾನ ಮಾಡುವುದು ಉತ್ತಮ' ಎಂದರು.
`ವೈಟ್ಫೀಲ್ಡ್- ಬೆನ್ನಿಗಾನಹಳ್ಳಿ ನಡುವೆ ಸಂಚಾರ ದಟ್ಟಣೆ ಸಮಸ್ಯೆ ಗಂಭೀರ ಸ್ವರೂಪ ತಾಳಿದೆ. ಪೈ ಬಡಾವಣೆ, ಕೆ.ಆರ್.ಪುರ, ಸಿ.ವಿ.ರಾಮನ್ ನಗರ, ಕಸ್ತೂರಿನಗರ, ಬಾಣಸವಾಡಿ, ರಾಮಮೂರ್ತಿನಗರ, ಕಮ್ಮನಹಳ್ಳಿ, ಫ್ರೇಜರ್ ಟೌನ್, ಇಂದಿರಾನಗರ, ಆರ್.ಟಿ.ನಗರ, ಹೆಬ್ಬಾಳ ಮತ್ತಿತರ ಕಡೆಗಳ ನಿವಾಸಿಗಳು ಉದ್ಯೋಗ ನಿಮಿತ್ತ ವೈಟ್ಫೀಲ್ಡ್ಗೆ ಹೋಗುವ ವೇಳೆ ಟಿನ್ ಫ್ಯಾಕ್ಟರಿ, ಮಹದೇವಪುರ, ಬರೂಕ ಜಂಕ್ಷನ್, ಗ್ರಾಫೈಟ್ ಜಂಕ್ಷನ್, ಹೂಡಿ ಜಂಕ್ಷನ್ನಲ್ಲಿ ಸಂಚಾರ ದಟ್ಟಣೆಯಲ್ಲಿ ಪಡಿಪಾಟಲು ಪಡಬೇಕಿದೆ. ರಸ್ತೆಯ ಅಗಲ 20 ಅಡಿ ಇದೆ.
ಬೆಳಿಗ್ಗೆ ಹಾಗೂ ಸಂಜೆ ವೇಳೆ ಟಿನ್ ಫ್ಯಾಕ್ಟರಿಯಿಂದ ಐಟಿಪಿಎಲ್ಗೆ ತಲುಪಲು ಒಂದೂವರೆ ಗಂಟೆ ಬೇಕಿದೆ. ಎತ್ತರಿಸಿದ ಮಾರ್ಗದಲ್ಲಿ ಮೆಟ್ರೊ ಕಾಮಗಾರಿ ಕೈಗೆತ್ತಿಕೊಂಡರೆ ಸಂಚಾರ ಸಮಸ್ಯೆ ದುಪ್ಪಟ್ಟು ಆಗಲಿದೆ' ಎಂದು ಅವರು ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.