ಬೆಂಗಳೂರು: ಫೇಸ್ಬುಕ್ ಮೂಲಕ ಸುಳ್ಳು ಸುದ್ದಿ ಹರಡುವುದಕ್ಕೆ ಸದ್ಯದಲ್ಲೇ ಕಡಿವಾಣ ಬೀಳಲಿದೆ. ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿರುವ ಕರ್ನಾಟಕದಲ್ಲಿ ಇಂತಹ ಪ್ರಯೋಗಕ್ಕೆ ಫೇಸ್ಬುಕ್ ಸಂಸ್ಥೆ ಮುಂದಾಗಿದೆ.
ಕ್ಯಾಲಿಫೋನಿರ್ಯಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಫೇಸ್ಬುಕ್ ಇದೇ ಮೊದಲ ಬಾರಿ ಭಾರತದಲ್ಲಿ ತನ್ನದೇ ತಂಡದಿಂದ ಸತ್ಯ ಸಂಗತಿ ಪರಿಶೀಲಿಸುವ ಪ್ರಯತ್ನಕ್ಕೆ ಮುಂದಾಗಿದೆ. ಬಳಕೆದಾರರು ಫೇಸ್ಬುಕ್ನಲ್ಲಿ ಹಂಚಿಕೊಳ್ಳುವ ಸುದ್ದಿಗಳ ನಿಜಾಂಶವನ್ನು ತಜ್ಞರ ತಂಡವು ಪರಿಶೀಲನೆಗೆ ಒಳಪಡಿಸಲಿದೆ. ವೈಯಕ್ತಿಕ ಬಳಕೆದಾರರು ಹಾಗೂ ಪುಟಗಳ ಅಡ್ಮಿನ್ಗಳು ಸುಳ್ಳು ಸುದ್ದಿಯನ್ನು ಹಂಚಿಕೊಂಡರೆ ಅಥವಾ ಈ ಹಿಂದೆ ಹಂಚಿಕೊಂಡಿದ್ದರೆ, ಅದನ್ನು ಪತ್ತೆಹಚ್ಚಲಿದೆ.
ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನವಾಗಲಿರುವ ಈ ಕಾರ್ಯಕ್ಕೆ ಮುಂಬೈನ ‘ಬೂಮ್’ ಎಂಬ ಸ್ವತಂತ್ರ ಡಿಜಿಟಲ್ ಪತ್ರಿಕೋದ್ಯಮ ಸಂಸ್ಥೆ ಫೇಸ್
ಬುಕ್ ಜೊತೆ ಕೈಜೋಡಿಸಲಿದೆ. ಪತ್ರಕರ್ತ ಗೋವಿಂದರಾಜ್ ಯತಿರಾಜ್ ‘ಬೂಮ್’ ಸಂಸ್ಥೆಯ ಸಂಸ್ಥಾಪಕರು.
‘ಸುದ್ದಿಯ ನೈಜತೆಯನ್ನು ತಟಸ್ಥ ಸಂಸ್ಥೆಯಿಂದ ಪರಿಶೀಲನೆಗೆ ಒಳಪಡಿಸುವುದು ಸುಳ್ಳು ಸುದ್ದಿ ಹರಡುವುದನ್ನು ತಡೆಯುವ ಸಮರದ ಒಂದು ಭಾಗ. ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಇಂತಹ ಸುದ್ದಿಗಳು ಹರಡುವುದು ಹೆಚ್ಚಾಗುತ್ತಿದೆ. ಹಾಗಾಗಿ ಈ ರಾಜ್ಯವನ್ನು ನಾವು ಆಯ್ಕೆ ಮಾಡಿಕೊಂಡಿದ್ದೇವೆ. ಕ್ರಮೇಣ ಈ ಕಾರ್ಯಕ್ರಮವನ್ನು ಇನ್ನಷ್ಟು ಬಲಪಡಿಸುತ್ತೇವೆ. ಸೋಮವಾರ ಸಂಜೆಯಿಂದಲೇ ಇದು ಅನುಷ್ಠಾನಕ್ಕೆ ಬಂದಿದೆ’ ಎಂದು ವಕ್ತಾರ ತಿಳಿಸಿದ್ದಾರೆ.
ಸುದ್ದಿಯ ನಿಜಾಂಶ ಪರಿಶೀಲನೆಗೆ ಫೇಸ್ಬುಕ್ ಮುಂದಾಗಿರುವ ಆಯ್ದ ರಾಷ್ಟ್ರಗಳ ಪೈಕಿ ಭಾರತವೂ ಒಂದು. ವಿಶ್ವಾಸಾರ್ಹತೆ ವೃದ್ಧಿಗಾಗಿ ಸಂಸ್ಥೆ ಈ ಕ್ರಮ ಕೈಗೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.