ADVERTISEMENT

ಸುಷ್ಮಿತಾಗೆ ಸಕಾಲಕ್ಕೆ ಚಿಕಿತ್ಸೆ ಸಿಗಲಿಲ್ಲ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಬೆಂಗಳೂರು:  `ಸ್ನೇಹಿತೆ ಸುಷ್ಮಿತಾಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಿದ್ದರೆ ಬದುಕುಳಿಯುತ್ತಿದ್ದಳು. ಆದರೆ, ಮಾಗಡಿ ರಸ್ತೆಯ ಖಾಸಗಿ ಆಸ್ಪತ್ರೆ ಸಿಬ್ಬಂದಿ ತೀವ್ರ ನಿಗಾ ಘಟಕದ ಸೌಲಭ್ಯವಿಲ್ಲ ಎಂಬ ಕಾರಣಕ್ಕೆ ಚಿಕಿತ್ಸೆ ನೀಡಲು ನಿರಾಕರಿಸಿದರು. ಆ ನಂತರ ಆಂಬುಲೆನ್ಸ್‌ನಲ್ಲಿ ಬೇರೊಂದು ಆಸ್ಪತ್ರೆಗೆ ಕರೆದೊಯ್ಯುವಾಗ ಆಕೆ ಮೃತಪಟ್ಟಳು~ ಎಂದು ಗಾಯಾಳು ಅನಿರುದ್ದ್ `ಪ್ರಜಾವಾಣಿ~ಗೆ ತಿಳಿಸಿದರು.

`ನಾವು ಪ್ರಯಾಣಿಸುತ್ತಿದ್ದ ಕಾರು ರಸ್ತೆಯ ಬಲ ಭಾಗದಲ್ಲಿತ್ತು. ಮುಂದೆ ಚಲಿಸುತ್ತಿದ್ದ ಲಾರಿಯ ಚಾಲಕ ಏಕಾಏಕಿ ಕಾರಿನ ಕಡೆಗೆ ವಾಹನ ನುಗ್ಗಿಸಿದ. ಈ ವೇಳೆ ಅಖಿಲ್ ವಾಹನವನ್ನು ಎಡಕ್ಕೆ ತಿರುಗಿಸಿದಾಗ, ಅಡ್ಡಾದಿಡ್ಡಿ ಚಲಿಸಿದ ಕಾರು ಮಣ್ಣಿನ ದಿಬ್ಬಕ್ಕೆ ಗುದ್ದಿ ಉರುಳಿ ಬಿದ್ದಿತು~ ಎಂದು ಅವರು ಘಟನೆಯನ್ನು ವಿವರಿಸಿದರು.

ಘಟನೆಯಲ್ಲಿ ಅನಿರುದ್ದ್ ಅವರ ಕೈ ಮತ್ತು ಕಿವಿಗೆ ಪೆಟ್ಟಾಗಿದೆ. ನಮ್ರತಾ ಅವರ ಮಂಡಿ ಮತ್ತು ಪಕ್ಕೆಲುಬಿಗೆ ಪೆಟ್ಟು ಬಿದ್ದಿದೆ. ಅಖಿಲ್ ಅವರ ಮೊಣಕೈ, ತಲೆ ಹಾಗೂ ಕುತ್ತಿಗೆ ಭಾಗಕ್ಕೆ ಗಾಯವಾಗಿದೆ.

`ಅಪಘಾತದಲ್ಲಿ ಗಾಯಗೊಂಡಿರುವ ಮಗ ಆಘಾತಗೊಂಡಿದ್ದಾನೆ. ಆತನಿಗೆ ಸುಷ್ಮಿತಾ ಸಾವನ್ನಪ್ಪಿರುವ ಸಂಗತಿ ಈವರೆಗೂ ಗೊತ್ತಿಲ್ಲ. ಲಾರಿ ಗುದ್ದಿದ್ದರಿಂದ ಕಾರು ಮಗುಚಿ ಬಿದ್ದಿತು ಎಂದಷ್ಟೇ ಆತ ಘಟನೆಯನ್ನು ವಿವರಿಸಿದ~ ಎಂದು ಅಖಿಲ್ ತಂದೆ ಅರುಣ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.