ಬೆಂಗಳೂರು: ‘ಅಂತರ್ಜಾಲದ ಬಳಕೆ ವಿಸ್ತಾರವಾಗುತ್ತಿದ್ದಂತೆ ಸೈಬರ್ ಅಪರಾಧಗಳು ಹೆಚ್ಚುತ್ತಿವೆ. ಹಾಗಾಗಿ ಬಳಕೆಯ ಜತೆಯಲ್ಲಿ ಅಪರಾಧಗಳ ಬಗ್ಗೆಯೂ ಗಮನ ನೀಡಬೇಕಿದೆ’ ಎಂದು ಸಿಐಡಿ ಸೈಬರ್ ಪೊಲೀಸ್ ಘಟಕದ ಎಸ್ಪಿ ಡಿ.ರೂಪಾ ತಿಳಿಸಿದರು.
ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಮಂಡಳಿಗಳ ಒಕ್ಕೂಟವು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸೈಬರ್ ಭದ್ರತೆ’ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬ್ಯಾಂಕ್ ವ್ಯವಹಾರ, ಪುಸ್ತಕ ಖರೀದಿ, ಶಾಪಿಂಗ್ ಸೇರಿದಂತೆ ಪ್ರತಿಯೊಂದಕ್ಕೂ ಆನ್ಲೈನ್ ಮೇಲೆ ಅವಲಂಬಿತವಾಗಿದ್ದೇವೆ. ಇದಲ್ಲದೇ ಸಾಮಾಜಿಕ ಜಾಲತಾಣಗಳು ಕೂಡ ಸಕ್ರಿಯವಾಗಿವೆ. ಹಾಗಾಗಿ ಆದಷ್ಟು ತಾಂತ್ರಿಕ ಭದ್ರತಾ ಕೌಶಲವನ್ನು ಅರಿಯುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.
‘ನಕಲಿ ಡೋಮೇನ್ ಸೃಷ್ಟಿಸಿ ಸಣ್ಣ ಸುಳಿವು ನೀಡದಂತೆ ಸೈಬರ್ ಅಪರಾಧ ಮಾಡುತ್ತಿದ್ದಾರೆ. ಇದನ್ನು ಪತ್ತೆ ಹಚ್ಚುವುದೇ ದೊಡ್ಡ ಸವಾಲಿನ ಸಂಗತಿ. ಜನರಲ್ಲಿ ಜಾಗೃತಿ ಮೂಡದ ಹೊರತು ಅಪರಾಧಗಳಿಗೆ ಕಡಿವಾಣ ಹಾಕಲು ಸಾಧ್ಯವಿಲ್ಲ’ ಎಂದು ತಿಳಿಸಿದರು.
‘ಅಮೆರಿಕದಲ್ಲಿ ಇದ್ದುಕೊಂಡೇ ಬೆಂಗಳೂರಿನ ನಿವಾಸಿಯ ಕ್ರೆಡಿಟ್ ಕಾರ್ಡ್ ಮಾಹಿತಿ ಕದ್ದು, ಹಣ ದೋಚಿದ ಪ್ರಕರಣಗಳು ಕಣ್ಮುಂದಿವೆ, ವಿದೇಶಿ ಮೂಲದ ಇ–ಮೇಲ್ ಸೇವಾ ಸಂಸ್ಥೆಗಳು ಪ್ರಕರಣ ವರದಿಯಾಗಿ ಒಂದೂವರೆ ತಿಂಗಳ ನಂತರ ಮಾಹಿತಿ ನೀಡಲು ನಿರಾಕರಿಸುತ್ತವೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಇದು ಕೂಡ ದೊಡ್ಡ ಸಮಸ್ಯೆಯಾಗಿದೆ’ ಎಂದು ಮಾಹಿತಿ ನೀಡಿದರು.
‘ತಂತ್ರಜ್ಞಾನ ತೀರಾ ಸುರಕ್ಷಿತ-ವೆಂದು ಭಾವಿಸುವುದು ತಪ್ಪು. ತಂತ್ರಜ್ಞಾನದ ಬಳಕೆಯ ಮೊದಲು ಅದರ ಒಳಿತು ಹಾಗೂ ಕೆಡಕು-ಗಳನ್ನು ಸೂಕ್ಷ್ಮವಾಗಿ ತಿಳಿದುಕೊಳ್ಳಬೇಕು. ಹಲವು ಬಾರಿ ಸೈಬರ್ ಅಪರಾಧದ ಆರೋಪಿಗಳು ಪತ್ತೆಯಾದರೂ ಶಿಕ್ಷೆಗೆ ಒಳಪಡಿಸಲು ಸಾಧ್ಯವಾಗುವ ದಾಖಲೆಗಳು ದೊರೆಯುವುದಿಲ್ಲ’ ಎಂದು ಮಾಹಿತಿ ನೀಡಿದರು.
ಒಕ್ಕೂಟದ ಅಧ್ಯಕ್ಷ ಆರ್.ಶಿವಕುಮಾರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.