ADVERTISEMENT

ಸ್ಥಳೀಯ ಆಪರೇಟರ್‌ಗಳಿಗೆ ತಾರತಮ್ಯ

​ಪ್ರಜಾವಾಣಿ ವಾರ್ತೆ
Published 19 ಜುಲೈ 2013, 19:59 IST
Last Updated 19 ಜುಲೈ 2013, 19:59 IST

ಬೆಂಗಳೂರು: ಕೇಬಲ್ ಸಂಪರ್ಕದ ಡಿಜಿಟಲೀಕರಣ ಪ್ರಕ್ರಿಯೆಯಲ್ಲಿ ಸ್ಥಳೀಯ ಕೇಬಲ್ ಆಪರೇಟರ್‌ಗಳಿಗೆ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರಕ್ಕೆ ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್ಸ್‌ ಅಸೋಸಿಯೇಷನ್ (ಕೆಎಸ್‌ಸಿಒಎ) ಪತ್ರ ಬರೆದಿದೆ.

ಈಗಿನ ಡಿಜಿಟಲ್ ಅಡ್ರೆಸಬಲ್ ಸಿಸ್ಟಮ್ (ಡಿಎಎಸ್) ಪ್ರಕ್ರಿಯೆಯು ನಾಲ್ಕೈದು ದೊಡ್ಡ ಕಂಪೆನಿಗಳಿಗೆ ನೆರವಾಗುವಂತಹುದು. ಈ ಕಂಪೆನಿಗಳು ಈಗಾಗಲೇ ಎಂಎಸ್‌ಒ ನೆಟ್‌ವರ್ಕ್, ಡಿಟಿಎಚ್ ಆಪರೇಷನ್ ಸೇರಿದಂತೆ ಮಾರುಕಟ್ಟೆಯಲ್ಲಿ ಈಗಾಗಲೇ ಏಕಸ್ವಾಮ್ಯ ಹೊಂದಿವೆ' ಎಂದು ಒಕ್ಕೂಟವು ಟ್ರಾಯ್ ಅಧ್ಯಕ್ಷ ರಾಹುಲ್ ಖುಲ್ಲರ್ ಅವರಿಗೆ ಪತ್ರ ಬರೆದಿದೆ.

`ಈ ಉದ್ಯಮ ವ್ಯವಸ್ಥೆಯನ್ನು ಟ್ರಾಯ್ ತಪ್ಪಾಗಿ ಅರ್ಥೈಸಿಕೊಂಡಿದೆ. ಸಾವಿರಾರು ಸಣ್ಣ ಕೇಬಲ್ ಆಪರೇಟರ್‌ಗಳಿಗೆ ತಾರತಮ್ಯ ಮಾಡುತ್ತಿದೆ. ಕೆಲವೇ ಮಂದಿಗೆ ಅನುಕೂಲ ಮಾಡಿಕೊಡುತ್ತಿದೆ' ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಅಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ಈ ಬಗ್ಗೆ ಪ್ರತಿಕ್ರಿಯಿಸಿ, `ಟ್ರಾಯ್ ಎಲ್ಲ ತೀರ್ಮಾನಗಳನ್ನು ಕೊನೆಯ ಕ್ಷಣದಲ್ಲೇ ತೆಗೆದುಕೊಳ್ಳುತ್ತದೆ. ನಮ್ಮ ಅಹವಾಲುಗಳನ್ನು ಆಲಿಸುವ ಕೆಲಸವನ್ನೂ ಮಾಡುತ್ತಿಲ್ಲ. ಡಿಜಿಟಲ್ ಅಡ್ರೆಸಬಲ್ ಸಿಸ್ಟಮ್ ಅಳವಡಿಕೆ ಸಂಬಂಧ ಕೇಬಲ್ ಟಿವಿ ಉದ್ಯಮದಿಂದ ಸಲ್ಲಿಕೆಯಾದ ಪತ್ರಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಮುಂಬೈ, ಕೋಲ್ಕತ್ತ ಹಾಗೂ ಚೆನ್ನೈಯಲ್ಲೂ ಈ ವ್ಯವಸ್ಥೆಯನ್ನು ಅನುಷ್ಠಾನ ಮಾಡುವಾಗಲೂ ಚರ್ಚೆ ನಡೆಸಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು.

`ಈ ಹಿಂದೆ ಬೇಸಿಕ್ ಸರ್ವಿಸ್ ಟಿಯರ್ (ಬಿಎಸ್‌ಟಿ)ನಲ್ಲಿ ಸಣ್ಣ ಕೇಬಲ್ ಆಪರೇಟರ್‌ಗಳ ಪಾಲು 30 ಚಾನೆಲ್‌ಗಳಿಗೆ 82 ರೂಪಾಯಿ ಆಗಿತ್ತು. ಈಗ ಅದನ್ನು 100 ಚಾನೆಲ್‌ಗಳಿಗೆ ಗರಿಷ್ಠ 45 ರೂಪಾಯಿ ಆಗಿದೆ. ಆದಾಯ ಕಡಿಮೆ ಆಗಿದೆ. ಚಾನೆಲ್‌ಗಳ ಸಂಖ್ಯೆ ಜಾಸ್ತಿ ಆಗಿದೆ. ಇದೊಂದು ತಪ್ಪು ಕ್ರಮ' ಎಂದು ಪತ್ರದಲ್ಲಿ ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.