ADVERTISEMENT

ಸ್ಥಿರಾಸ್ತಿ ದರ: ಆಕ್ಷೇಪಣೆಗೆ 15 ದಿನಗಳು

​ಪ್ರಜಾವಾಣಿ ವಾರ್ತೆ
Published 20 ಜುಲೈ 2013, 20:05 IST
Last Updated 20 ಜುಲೈ 2013, 20:05 IST

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಸ್ಥಿರಾಸ್ತಿ ಮಾರ್ಗಸೂಚಿ ಬೆಲೆಯಲ್ಲಿ ಸರಾಸರಿ ಶೇಕಡ 20ರಿಂದ 30ರಷ್ಟು ಹೆಚ್ಚಳ ಮಾಡಿ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದೆ. ಇದಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲು 15 ದಿನಗಳ ಅವಕಾಶ ಕಲ್ಪಿಸಿದ್ದು, ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ಅಧಿಸೂಚನೆ ಪ್ರಕಟವಾಗಲಿದೆ.

ಸ್ಥಿರಾಸ್ತಿಯ ಹಾಲಿ ಮಾರುಕಟ್ಟೆ ದರ, ಸ್ಥಿರಾಸ್ತಿಯ ಸಂಪರ್ಕಕ್ಕೆ ಇರುವ ರಸ್ತೆಗಳು, ಅ ಪ್ರದೇಶದಲ್ಲಿ ನಡೆಯುವ ವಾಣಿಜ್ಯ ಚಟುವಟಿಕೆಗಳು, ಕೈಗಾರಿಕಾ ಬೆಳವಣಿಗೆ, ಅಭಿವೃದ್ಧಿ ಸಾಧ್ಯತೆ ಮತ್ತಿತರ ಅಂಶಗಳನ್ನು ಆಧರಿಸಿ ಮಾರ್ಗಸೂಚಿ ಕರಡು ಅಧಿಸೂಚನೆ ಪ್ರಕಟಿಸಲಾಗಿದೆ.

ನಗರದ ಅಪಾರ್ಟ್‌ಮೆಂಟ್‌ಗಳ ಮಾರ್ಗಸೂಚಿ ಬೆಲೆ ನಿಗದಿ ಮಾಡುವಲ್ಲಿ ಈ ಬಾರಿ ಹೊಸ ವಿಧಾನವೊಂದನ್ನು ಜಾರಿಗೆ ತರಲಾಗಿದೆ. ಇದರ ಅನ್ವಯ, ಅಪಾರ್ಟ್‌ಮೆಂಟ್‌ನ ಪ್ರತಿ ಮಹಡಿಗೂ ಒಂದೊಂದು ರೀತಿಯ ಬೆಲೆ ನಿಗದಿಮಾಡಲಾಗಿದೆ. ಅಲ್ಲದೆ, ಅಪಾರ್ಟ್‌ಮೆಂಟ್‌ಗಳು ಒದಗಿಸುವ ಸೌಲಭ್ಯವನ್ನೂ ಬೆಲೆ ನಿಗದಿಯ ವೇಳೆ ಪರಿಗಣನೆಗೆ ತೆಗೆದುಕೊಳ್ಳಲಾಗಿದೆ.

ನಗರದ ಅಪಾರ್ಟ್‌ಮೆಂಟ್‌ಗಳಲ್ಲಿ ಐದನೆಯ ಮಹಡಿವರೆಗೆ ಮಾರ್ಗಸೂಚಿ ಬೆಲೆಯಲ್ಲಿ ಹೆಚ್ಚಳ ಇರುವುದಿಲ್ಲ. ಆರರಿಂದ 15ನೇ ಮಹಡಿವರೆಗೆ, ಪ್ರತಿ ಮಹಡಿಗೆ ಸ್ಥಿರಾಸ್ತಿ ಬೆಲೆ ಶೇಕಡ 0.5ರಷ್ಟು ಹೆಚ್ಚಳ ಆಗಿದೆ. 15ನೇ ಮಹಡಿಗಿಂತ ಮೇಲಿರುವ ಸ್ಥಿರಾಸ್ತಿಯ ಮಾರ್ಗಸೂಚಿ ಬೆಲೆಯಲ್ಲಿ ಹೆಚ್ಚಳ ಆಗಿಲ್ಲ.

ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಮಹಾತ್ಮ ಗಾಂಧಿ ರಸ್ತೆ, ಜಯನಗರ, ಕೋರಮಂಗಲ, ಸದಾಶಿವನಗರ ಮುಂತಾದ ಪ್ರದೇಶಗಳ ಸ್ಥಿರಾಸ್ತಿ ಬೆಲೆಯಲ್ಲಿ ದೊಡ್ಡ ಪ್ರಮಾಣದ ಹೆಚ್ಚಳ ಮಾಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದರು.

ಗಾಂಧಿ ಬಜಾರ್‌ನಲ್ಲಿ ನಿವೇಶನದ ಬೆಲೆ ಪ್ರತಿ ಚದರ ಅಡಿಗೆ 8,000 ರೂಪಾಯಿ ನಿಗದಿ ಮಾಡಲಾಗಿದೆ. ಅದೇ ಪ್ರದೇಶದಲ್ಲಿ ಅಪಾರ್ಟ್‌ಮೆಂಟ್ ಬೆಲೆಯನ್ನು ಪ್ರತಿ ಚದರ ಅಡಿಗೆ 6,890 ರೂಪಾಯಿಗೆ (ಮೊಸಾಯಿಕ್) ನಿಗದಿಪಡಿಸಲಾಗಿದೆ. ಸೌತ್‌ಎಂಡ್ ವೃತ್ತದ ಬಳಿ ನಿವೇಶನದ ಬೆಲೆ ಪ್ರತಿ ಚದರ ಅಡಿಗೆ 9,000 ರೂಪಾಯಿ ಆಗಲಿದೆ.

ಮಾಧವ ಪಾರ್ಕ್ ಪ್ರದೇಶದಲ್ಲಿ ನಿವೇಶನ ಬೆಲೆ ಪ್ರತಿ ಚದರ ಅಡಿಗೆ 8,000 ರೂಪಾಯಿ ಆಗಲಿದೆ. ಜಯನಗರ ನಾಲ್ಕನೇ ಬ್ಲಾಕ್‌ನಲ್ಲಿ ನಿವೇಶನದ ಬೆಲೆ ಪ್ರತಿ ಚದರ ಅಡಿಗೆ 11,000 ರೂಪಾಯಿ ಆಗಲಿದೆ. ನಗರ ಜಿಲ್ಲೆಯ ಐದು ವಿಭಾಗಗಳ 42 ಉಪ ನೋಂದಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿ ಸ್ಥಿರಾಸ್ತಿಗೆ ನಿಗದಿಪಡಿಸಿರುವ ದರದ ವಿವರವನ್ನು ಈ ವೆಬ್‌ಸೈಟ್‌ನಲ್ಲಿ ಪಡೆಯಬಹುದು: http://www.karunadu.gov.in/karigr/

ಪರಿಷ್ಕೃತ ಮಾರ್ಗಸೂಚಿ ಕರಡು ಬೆಲೆಯನ್ನು ಇದೇ 17ರಂದು ಪ್ರಕಟಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಪ್ರಕಟವಾದ ದಿನದಿಂದ ಒಟ್ಟು 15 ದಿನಗಳ ಕಾಲಾವಕಾಶ ನೀಡಲಾಗಿದೆ. ಆಕ್ಷೇಪಣೆಗಳನ್ನು ಈ ವಿಳಾಸಕ್ಕೆ ಕಳುಹಿಸಬಹುದು: ನೋಂದಣಿ ಮಹಾಪರಿವೀಕ್ಷಕರು, ಮುದ್ರಾಂಕಗಳ ಆಯುಕ್ತರ ಕಚೇರಿ, ಕಂದಾಯ ಭವನ, 8ನೇ ಮಹಡಿ, ಕೆ.ಜಿ. ರಸ್ತೆ, ಬೆಂಗಳೂರು - 560009.

ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಯ ಕರಡು ಪಟ್ಟಿ ಬಹುತೇಕ ಸಿದ್ಧವಾಗಿದ್ದು, ಸೋಮವಾರದ ನಂತರ ಪ್ರಕಟವಾಗುವ ಸಾಧ್ಯತೆ ಇದೆ ಎಂದು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಮೂಲಗಳು ತಿಳಿಸಿವೆ.
ಇ-ಮೇಲ್ ವಿಳಾಸ: cvcobjections2013@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.