ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ ಮುಂದೂಡಿ

​ಪ್ರಜಾವಾಣಿ ವಾರ್ತೆ
Published 18 ಮೇ 2012, 19:40 IST
Last Updated 18 ಮೇ 2012, 19:40 IST

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆ ಕಾಲೇಜುಗಳಲ್ಲಿ ಖಾಲಿ ಇರುವ 1764 ಉಪನ್ಯಾಸಕರುಗಳ ಹುದ್ದೆಗಳಿಗೆ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟವು ಒತ್ತಾಯಿಸಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಜೂನ್ 15 ಕೊನೆಯ ದಿನವಾಗಿದೆ. ಜಾತಿ ಪ್ರಮಾಣ ಪತ್ರ, ಗ್ರಾಮೀಣ, ಕನ್ನಡ ಮಾಧ್ಯಮ, ಗ್ರಾಮೀಣ ಸಿಂಧುತ್ವ ಪ್ರಮಾಣ ಪತ್ರಗಳನ್ನು ಹೊಸದಾಗಿ ಪಡೆದು ಅದರ ಸಂಖ್ಯೆ ಹಾಗೂ ದಿನಾಂಕಗಳನ್ನು ನಮೂದಿಸಲು ಇಲಾಖೆ ತಿಳಿಸಿದೆ.  ಈ ಅಗತ್ಯ ಪ್ರಮಾಣ ಪತ್ರಗಳನ್ನು ಪಡೆಯಲು ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಸಮಯದಲ್ಲಿ ಸಿಗದೇ ಇರುವುದರಿಂದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಪರದಾಡುವಂತಾಗಿದೆ.

ಪದವಿಪೂರ್ವ ಶಿಕ್ಷಣ ಇಲಾಖೆಯು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಜೂನ್ 9 ರಂದು ನಡೆಸಲಾಗುವುದೆಂದು ಹೇಳಿದೆ. ವಿವಿಧ ಪ್ರಮಾಣ ಪತ್ರಗಳನ್ನು ಪಡೆಯಲು ಅಲ್ಲಿಯೇ ಒಂದು ತಿಂಗಳು ಕಳೆದಿರುತ್ತದೆ. ಕರ್ನಾಟಕ ಲೋಕ ಸೇವಾ ಆಯೋಗ ಮತ್ತಿತರ ಇಲಾಖೆಗಳು ವಿವಿಧ ಪರೀಕ್ಷೆಗಳನ್ನು ಬರೆಯಲು ಸಿದ್ಧತೆ ಮಾಡಿಕೊಳ್ಳಲು 3 ತಿಂಗಳುಗಳ ಕಾಲಾವಕಾಶ ನೀಡುತ್ತಿದ್ದವು. ಆದರೆ, ಈ ಪರೀಕ್ಷೆಗೆ ಕೇವಲ 15 ದಿನಗಳು ಮಾತ್ರ ದೊರೆತಿವೆ.

ಪರೀಕ್ಷೆಗೆ ಬೇಕಾದ ಪರಾಮರ್ಶನ ಗ್ರಂಥಗಳನ್ನು ಸೇರಿಸಬೇಕಾದ ಅಗತ್ಯವಿದೆ. ಇಲ್ಲವಾದಲ್ಲಿ ಅಭ್ಯರ್ಥಿಗಳಿಗೆ ಯಾವ ಲೇಖಕರ ಪುಸ್ತಕವನ್ನು ಅಧ್ಯಯನ ಮಾಡಬೇಕು ಎಂಬ ಗೊಂದಲಮಯ ವಾತಾವರಣ ನಿರ್ಮಾಣವಾಗುತ್ತದೆ.

ಈಗಾಗಲೇ ನೀಡಿರುವ ಪಠ್ಯಪುಸ್ತಕವನ್ನು ಅರ್ಥಮಾಡಿಕೊಂಡು ವಿವಿಧ ಪುಸ್ತಕ, ನೋಟ್ಸ್‌ಗಳನ್ನು ಸಂಗ್ರಹಿಸಿ ಸಮಗ್ರವಾಗಿ ಅಧ್ಯಯನ ಮಾಡಲು ಕನಿಷ್ಠ 3 ತಿಂಗಳು ಕಾಲಾವಕಾಶ ಬೇಕಾಗಿದೆ. ಕೆಎಎಸ್ ನ ಮುಖ್ಯ ಪರೀಕ್ಷೆಗೆ ಇಡುವಂತಹ ಪಠ್ಯಕ್ರಮವನ್ನು ಪಿಯುಸಿ ಉಪನ್ಯಾಸಕರ ಹುದ್ದೆಗಳಿಗೆ ಇಡಲಾಗಿದೆ. ಇದು ತೀವ್ರ ಕಠಿಣವಾಗಿ ಸೆಮಿಸ್ಟರ್ ಅಲ್ಲದ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಗ್ರಹಿಸಲು ಕಷ್ಟವಾಗುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.