ಬೆಂಗಳೂರು: ಸಿದ್ಧ ಉಡುಪು ಕಾರ್ಖಾನೆಯ ಉದ್ಯೋಗಿಯನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಹಣ, ಮೊಬೈಲ್ ಫೋನ್ ದರೋಡೆ ಮಾಡಿದ ಘಟನೆ ಮೈಕೊಲೇಔಟ್ ಸಮೀಪದ ಬಿಳೇಕಹಳ್ಳಿ ಬಸ್ ನಿಲ್ದಾಣದ ಬಳಿ ಗುರುವಾರ ರಾತ್ರಿ ನಡೆದಿದೆ.
ಚೆನ್ನೈ ಮೂಲದ ಶಂಕರರೆಡ್ಡಿ ದರೋಡೆಗೊಳಗಾದವರು. ಸಿದ್ಧ ಉಡುಪು ಕಾರ್ಖಾನೆಯಲ್ಲಿ ವ್ಯವಸ್ಥಾಪಕರಾಗಿರುವ ಅವರು ಸ್ನೇಹಿತನನ್ನು ಭೇಟಿ ಮಾಡಲು ನಗರಕ್ಕೆ ಬಂದಿದ್ದರು. ಬಿಳೇಕಹಳ್ಳಿಯಲ್ಲಿರುವ ಸ್ನೇಹಿತನ ಮನೆಗೆ ಹೋಗಿ ಅಲ್ಲಿಂದ ರಾತ್ರಿ 12 ಗಂಟೆ ಸುಮಾರಿಗೆ ರಾಮಮೂರ್ತಿನಗರಕ್ಕೆ ಹೋಗಲು ಬಸ್ ನಿಲ್ದಾಣಕ್ಕೆ ಹೋಗುತ್ತಿದ್ದ ವೇಳೆ ಅವರನ್ನು ಇಬ್ಬರು ಅಡ್ಡಗಟ್ಟಿದ್ದಾರೆ. ಚಾಕುವಿನಿಂದ ಬೆದರಿಸಿದ ದುಷ್ಕರ್ಮಿಗಳು ಹಣ ನೀಡುವಂತೆ ಕೇಳಿದ್ದಾರೆ.
ಇದಕ್ಕೆ ಶಂಕರರೆಡ್ಡಿ ಅವರು ಪ್ರತಿರೋಧ ತೋರಿದಾಗ ಕಿಡಿಗೇಡಿಗಳು ಅವರ ಮೇಲೆ ಹಲ್ಲೆ ನಡೆಸಿ ಹೊಟ್ಟೆಗೆ ಇರಿದು 3.200 ರೂಪಾಯಿ, ಮೊಬೈಲ್ ಫೋನ್ ಮತ್ತು ವಾಹನ ಚಾಲನಾ ಪರವಾನಗಿ ದೋಚಿ ಪರಾರಿಯಾಗಿದ್ದಾರೆ. ಶಂಕರರೆಡ್ಡಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮೈಕೊಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೇಶ್ಯಾವಾಟಿಕೆ: ಬಂಧನ- ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಹೈದರಾಬಾದ್ ಮೂಲಕದ ಬಾವೇಶ್ ಕಲಾನಿ ಉರುಫ್ ವಿಕಾಸ್ರೆಡ್ಡಿ (50) ಎಂಬಾತನನ್ನು ಪೂರ್ವ ವಿಭಾಗದ ಪೊಲೀಸರು ಬಂಧಿಸಿದ್ದಾರೆ.
ಎಚ್ಆರ್ಬಿಆರ್ ಲೇಔಟ್ ಸಮೀಪದ ಕಲ್ಯಾಣನಗರದಲ್ಲಿ ಬಾಡಿಗೆ ಮನೆಯಲ್ಲಿದ್ದ ಆತ ನಾಲ್ವರು ಯುವತಿಯರನ್ನು ಇಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದ. ಯುವತಿಯರ ಭಾವಚಿತ್ರಗಳನ್ನು ಗ್ರಾಹಕರಿಗೆ ಇ-ಮೇಲ್ ಮೂಲಕ ಕಳುಹಿಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ. ಯುವತಿಯರು ಹೊರ ರಾಜ್ಯದವರು ಎಂದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.