ಬೆಂಗಳೂರು: ಇಸ್ರೇಲ್ ಮೂಲದ ಪ್ರೇಯಸಿಯನ್ನು ಕೊಲೆ ಮಾಡಿ, ಪತ್ನಿಗೂ ಗೊತ್ತಾಗದ ಹಾಗೆ ಶವವನ್ನು ಹವಾನಿಯಂತ್ರಿತ ಪೆಟ್ಟಿಗೆಯಲ್ಲಿ ಬಚ್ಚಿಟ್ಟು ಸುದ್ದಿ ಮಾಡಿದ್ದ `ಯೋಗಗುರು~ ಲೋಕೇಶ್ ಚಂದ್ರದಾಸ್ಗೆ ಜಾಮೀನು ನೀಡಿ ಸೆಷನ್ಸ್ ಕೋರ್ಟ್ ಆದೇಶಿಸಿದೆ.
ತಾನು ಕ್ಯಾನ್ಸರ್ನಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಚಿಕಿತ್ಸೆಗಾಗಿ ಜಾಮೀನು ನೀಡುವಂತೆ ಮಾಡಿಕೊಂಡ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ. ಒಂದು ಲಕ್ಷ ರೂಪಾಯಿ ಮೊತ್ತದ ಭದ್ರತೆ ಪಡೆದುಕೊಂಡು ಜಾಮೀನು ನೀಡಲಾಗಿದೆ.
ಘಟನೆ ವಿವರ: ಕನಕಪುರ ಮುಖ್ಯರಸ್ತೆಯ ಗುಬ್ಬಲಾಳ ಗ್ರಾಮದ ಬಳಿ ಇರುವ `ಮಂತ್ರಿ ಟ್ರ್ಯಾಂಕ್ವಿಲ್~ ಅಪಾರ್ಟ್ಮೆಂಟ್ನಲ್ಲಿ 2011ರ ಮೇ ತಿಂಗಳಿನಲ್ಲಿ ಕೊಲೆ ನಡೆದಿತ್ತು. ಇಸ್ರೇಲ್ನಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ ಟ್ಯಾಮರ್ ಫರಾ ಅಬ್ರಹಾಂ ಕೊಲೆಯಾದವರು. ಟ್ಯಾಮರ್ ಅವರ ಪ್ರಿಯಕರ ಲೋಕೇಶ್. ಯೋಗ ತರಗತಿಗಳನ್ನು ನಡೆಸುತ್ತಿದ್ದ ಲೋಕೇಶ್ ವಿವಾಹಿತ. ಪತ್ನಿ ಜ್ಯೋತಿ ವೈದ್ಯನಾಥನ್ ನಗರದ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಎಂಜಿನಿಯರ್.
ಯೋಗ ತರಗತಿಗಳನ್ನು ನಡೆಸುವ ಸಲುವಾಗಿ ಲೋಕೇಶ್ 2007ರಲ್ಲಿ ಋಷಿಕೇಶಕ್ಕೆ ಹೋಗಿದ್ದ. ಯೋಗದ ಬಗ್ಗೆ ಆಸಕ್ತಿ ಹೊಂದಿದ್ದ ಟ್ಯಾಮರ್ ಋಷಿಕೇಶಕ್ಕೆ ಬಂದು ಲೋಕೇಶ್ನ ತರಗತಿಗಳಿಗೆ ಹಾಜರಾಗಿದ್ದರು. ಆ ಸಂದರ್ಭದಲ್ಲಿ ಅವರ ನಡುವೆ ಪ್ರೇಮಾಂಕುರವಾಗಿತ್ತು.
ಲೋಕೇಶ್ನನ್ನು ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ ಟ್ಯಾಮರ್ಗೆ ಲೋಕೇಶ್ ಮದುವೆಯಾಗಿರುವ ವಿಷಯ ಗೊತ್ತಾಗಿತ್ತು. ಅತ್ತ ಪ್ರೀತಿಯ ವಿಷಯ ಪತ್ನಿ ಜ್ಯೋತಿಯವರಿಗೂ ತಿಳಿಯಿತು. ಕೋಪಗೊಂಡ ಜ್ಯೋತಿ ಸಂಬಂಧಿಕರ ಮನೆಗೆ ಹೋದರು.
ವಿವಾಹವಾದ ವಿಷಯ ತಿಳಿಸದ ಹಿನ್ನೆಲೆಯಲ್ಲಿ ಟ್ಯಾಮರ್ ಲೋಕೇಶ್ ಜೊತೆ ಜಗಳವಾಡಿದರು. ತನ್ನ ಗುಟ್ಟು ರಟ್ಟಾಗುತ್ತಿದ್ದಂತೆಯೇ ಲೋಕೇಶ್ ಟ್ಯಾಮರ್ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಕೊಲೆ ಮಾಡಿದ್ದ. ನಂತರ ಶವವನ್ನು ತನ್ನ ಯೋಗಾಭ್ಯಾಸದ ಕೊಠಡಿಯಲ್ಲಿ ಹವಾನಿಯಂತ್ರಿತ ಶವಪೆಟ್ಟಿಗೆಯಲ್ಲಿ ಬಚ್ಚಿಟ್ಟಿದ್ದ.
ಟ್ಯಾಮರ್ ಅವರನ್ನು ಇಸ್ರೇಲ್ಗೆ ವಾಪಸ್ ಕಳುಹಿಸಿರುವುದಾಗಿ ಪತ್ನಿಗೆ ಸುಳ್ಳು ಹೇಳಿದ್ದ ಆತ, ಪತ್ನಿಯನ್ನು ಮನೆಗೆ ಕರೆದುಕೊಂಡು ಬಂದಿದ್ದ. ಶವವಿದ್ದ ಕೊಠಡಿಗೆ ಜ್ಯೋತಿ ಹೆಚ್ಚಾಗಿ ಹೋಗುತ್ತಿರಲಿಲ್ಲ. ಆದುದರಿಂದ ತಮ್ಮ ಮನೆಯಲ್ಲಿ ಶವವಿದೆ ಎಂಬ ವಿಷಯ ಅವರಿಗೆ ತಿಳಿದೇ ಇರಲಿಲ್ಲ.
ಲೋಕೇಶ್, ಶವವನ್ನು ಹೊರಗೆ ಸಾಗಿಸಲು ಹಲವು ಬಾರಿ ಯತ್ನಿಸಿದ್ದ. ಆದರೆ ಅಪಾರ್ಟ್ಮೆಂಟ್ನ ಕಾವಲು ಸಿಬ್ಬಂದಿಯ ಕಣ್ತಪ್ಪಿಸಿ ಶವ ಸಾಗಿಸಲು ಸಾಧ್ಯವಾಗಿರಲಿಲ್ಲ. ಆದರೆ ಒಂದು ದಿನ ಜ್ಯೋತಿಯವರ ತಾಯಿಗೆ ವಿಷಯ ತಿಳಿದು ಪೊಲೀಸರಲ್ಲಿ ದೂರು ದಾಖಲು ಮಾಡಿದ್ದರು ಎಂಬುದಾಗಿ ಪ್ರಥಮ ಮಾಹಿತಿ ವರದಿಯಲ್ಲಿ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.