ಬೆಂಗಳೂರು: ಹವಾಲಾ ಹಣ ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿರುವ ನಗರದ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ₨ 33.57 ಲಕ್ಷ ವಶಪಡಿಸಿಕೊಂಡಿದ್ದಾರೆ.
ಅಕ್ಕಿಪೇಟೆಯ ದೇವಿಚಂದ್ (57), ಚಿಕ್ಕಪೇಟೆಯ ಪಿ.ಎಸ್.ಲೇನ್ನ ಗೋಪಾರಾಂ (25), ಹಳೆ ತರಗುಪೇಟೆಯ ರತನ್ (19) ಮತ್ತು ಕಬ್ಬನ್ಪೇಟೆಯ ಮುಖೇಶ್ (33) ಬಂಧಿತರು.
ರಾಜಸ್ತಾನ ಮೂಲದ ಆರೋಪಿಗಳು ಚಿಕ್ಕಪೇಟೆ ಸಮೀಪದ ಮಾಮೂಲ್ ಪೇಟೆಯಲ್ಲಿನ ವಿಕಾಸ್ ಬ್ಯಾಂಗಲ್ ಸ್ಟೋರ್್ಸ್ ಮತ್ತು ಮನೋಜ್ ಗಾರ್ಮೆಂಟ್ಸ್ ಮಳಿಗೆಗಳಲ್ಲಿ ಹವಾಲಾ ಹಣ ಇಟ್ಟುಕೊಂಡಿದ್ದರು. ಆ ಹಣಕ್ಕೆ ಸಂಬಂಧಪಟ್ಟಂತೆ ಅವರ ಬಳಿ ಯಾವುದೇ ದಾಖಲೆಪತ್ರಗಳು ಇರಲಿಲ್ಲ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
ಆರು ತಿಂಗಳಿನಿಂದ ಈ ದಂಧೆ ನಡೆಸುತ್ತಿದ್ದ ಆರೋಪಿಗಳು ಸರ್ಕಾರಕ್ಕೆ ತೆರಿಗೆ ವಂಚನೆ ಮಾಡಿದ್ದಾರೆ. ಅವರಿಂದ ನೋಟು ಎಣಿಕೆ ಯಂತ್ರ ಮತ್ತು ನಾಲ್ಕು ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ. ಬಂಧಿತರ ವಿರುದ್ಧ ಚಿಕ್ಕಪೇಟೆ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅವರ ಸಹಚರರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.