ADVERTISEMENT

‘ಹಸಿರು ಹಬ್ಬ’ದಲ್ಲಿ ಅನಾವರಣಗೊಂಡ ಚಿಂದಿ ಆಯುವ ಜನರ ಬದುಕು

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 19:29 IST
Last Updated 17 ಜೂನ್ 2017, 19:29 IST
ಹಸಿರು ಹಬ್ಬದಲ್ಲಿ ಭಾಗವಹಿಸಿದ್ದ ಚಿಂದಿ ಆಯುವವರು -–ಪ್ರಜಾವಾಣಿ ಚಿತ್ರ
ಹಸಿರು ಹಬ್ಬದಲ್ಲಿ ಭಾಗವಹಿಸಿದ್ದ ಚಿಂದಿ ಆಯುವವರು -–ಪ್ರಜಾವಾಣಿ ಚಿತ್ರ   

ಬೆಂಗಳೂರು: ದಿನಾಲೂ ಕಸದ ರಾಶಿಯ ನಡುವೆ ಕೆಲಸ ಮಾಡುತ್ತಿದ್ದ ಕಸ ಸಂಗ್ರಹಕಾರರ (ಚಿಂದಿ ಆಯುವವರು) ಕೈಗಳು ಇಲ್ಲಿ ಸುಂದರ ರಂಗೋಲಿಗಳನ್ನು ಬಿಡಿಸಿದವು.

ಅವರ ಮಕ್ಕಳು ಹಾಡುತ್ತ, ಕುಣಿಯುತ್ತ ಮೋಜನ್ನು ಅನುಭವಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಾಡು, ನೃತ್ಯ ಮೂಲಕ ಪ್ರತಿಭೆ ಪ್ರದರ್ಶಿಸಿದರು.

ಚಿಂದಿ ಆಯುವವರಿಗೆ ‘ಹಸಿರು ದಳ’ ಸ್ವಯಂಸೇವಾ ಸಂಸ್ಥೆಯು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ವೇದಿಕೆ ಕಲ್ಪಿಸಿಕೊಟ್ಟಿತ್ತು. ಇಲ್ಲಿ ಏರ್ಪಡಿಸಿದ್ದ ‘ಹಸಿರು ಹಬ್ಬ’ ಕಾರ್ಯಕ್ರಮದಲ್ಲಿ ನೂರಾರು ಚಿಂದಿ ಆಯುವವರು ಭಾಗವಹಿಸಿದ್ದರು. ಕೆಲವರು ಜೀವನ ಪಯಣದ ಅನುಭವ ಹಂಚಿಕೊಂಡರು.

ಕಸ ಸಂಗ್ರಹದ ಕೆಲಸ ಮಾಡುವ ಲಕ್ಷ್ಮಿ,‘ಗುಜರಿ ವಸ್ತುಗಳನ್ನು ಆಯುವ ನಮ್ಮನ್ನು ಜನರು ಕೀಳಾಗಿ ಕಾಣುತ್ತಾರೆ. ಸಂಸ್ಥೆಯಿಂದ ತರಬೇತಿ ಪಡೆದ ಬಳಿಕ ಒಣ ಮತ್ತು ಹಸಿ ಕಸ ವಿಂಗಡಣೆಯ ವಿಧಾನ ತಿಳಿದುಕೊಂಡೆ. ಹಾಗೆಯೇ, ಸರ್ಕಾರ ನಮ್ಮಂತಹ ಕಾರ್ಮಿಕರಿಗೆ ನೀಡುವ ಸೌಲಭ್ಯಗಳ ಬಗ್ಗೆ ತಿಳಿದು, ಅವುಗಳನ್ನು ಪಡೆದೆ’ ಎಂದರು.

ಸಂಸ್ಥೆಯ ಸಂಸ್ಥಾಪಕಿ ನಳಿನಿ ಶೇಖರ್‌, ‘ಕಸ ಸಂಗ್ರಹಕಾರರಿಗೆ ಎಲ್‌ಐಸಿಯಲ್ಲಿನ ಆಮ್‌ ಆದ್ಮಿ ಎಂಬ ಜೀವ ವಿಮೆಯನ್ನು  ಮಾಡಿಸಬೇಕಿದೆ. ವಿಮೆಯ ಕಂತಿನ ಮೊತ್ತ ₹ 200 ಇದೆ. ರಾಜ್ಯ ಸರ್ಕಾರ ₹ 100 ಭರಿಸುತ್ತಿದೆ. ಸಂಸ್ಥೆ ₹ 50 ನೀಡುತ್ತಿದೆ. ಉಳಿದ ₹ 50 ಅನ್ನು ಬಿಬಿಎಂಪಿ ನೀಡಲಿ’ ಎಂದು ಮನವಿ ಮಾಡಿದರು.

ಮದ್ಯಪಾನ, ಧೂಮಪಾನ ದುಶ್ಚಟಗಳಿಂದ ಮುಕ್ತವಾಗಲು ನಿಮಾನ್ಸ್‌ನ ವೈದ್ಯಕೀಯ ಸಿಬ್ಬಂದಿ ಕಸ ಸಂಗ್ರಹಕಾರರಿಗೆ ಆಪ್ತ ಸಲಹೆ ನೀಡಿದರು. ಉಚಿತ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಲಾಗಿತ್ತು.
*
ಚಿಂದಿ ಆಯುವವರರಿಗೆ ವಸತಿ, ವಿಮೆ ಮೊತ್ತ ಮತ್ತು ಬಿಪಿಎಲ್‌ ಪಡಿತರ ಚೀಟಿ ಕೊಡಿಸಲು ಪ್ರಯತ್ನಿಸುತ್ತೇನೆ.
ಜಿ.ಪದ್ಮಾವತಿ,
ಮೇಯರ್‌ ಬಿಬಿಎಂಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.