ADVERTISEMENT

ಹೊಂಡಕ್ಕೆ ಬಿದ್ದು ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 19:30 IST
Last Updated 14 ಫೆಬ್ರುವರಿ 2012, 19:30 IST

ಬೆಂಗಳೂರು: ಕಾಲು ಜಾರಿ ಹೊಂಡಕ್ಕೆ ಬಿದ್ದು ಇಬ್ಬರು ಮಹಿಳೆಯರು ಸಾವನ್ನಪ್ಪಿದ ಘಟನೆ ಎಚ್‌ಎಸ್‌ಆರ್ ಲೇಔಟ್ ಸಮೀಪದ ಭೋವಿ ಕಾಲೋನಿ ಬಂಡೆಯ ಬಳಿ ಮಂಗಳವಾರ ಸಂಭವಿಸಿದೆ.

ರಾಯಚೂರು ಮೂಲದ ಹುಲಿಗಮ್ಮ(19) ಹಾಗೂ ಪಾರ್ವತಮ್ಮ(19) ಸಾವನ್ನಪ್ಪಿದವರು. ವಿವಾಹಿತರಾಗಿದ್ದ ಇವರು ಭೋವಿ ಕಾಲೋನಿ ಬಂಡೆ ಬಳಿ ನಿರ್ಮಾಣವಾಗುತ್ತಿರುವ ಕಟ್ಟಡ ನಿರ್ಮಾಣದ ಕೆಲಸಕ್ಕೆಂದು ಸಂಬಂಧಿಕರೊಂದಿಗೆ ಬಂದಿದ್ದರು.
 
ಅಲ್ಲಿಯೇ ಶೆಡ್‌ವೊಂದರಲ್ಲಿ ವಾಸವಾಗಿದ್ದ ಅವರು ಬೆಳಿಗ್ಗೆ ಬಟ್ಟೆ ತೊಳೆಯಲು ಹೋದಾಗ ಕಾಲು ಜಾರಿ ಹೊಂಡಕ್ಕೆ ಬಿದ್ದಿದ್ದಾರೆ ಎಂದು ಪೊಲೀಸರು ತಿಳಿಸಿದರು.  ಸಂಜೆಯಾದರೂ ಮನೆಗೆ ಬರದಿದ್ದರಿಂದ ಆತಂಕಗೊಂಡ ಸಂಬಂಧಿಕರು ಹೊಂಡದ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಹುಲಿಗಮ್ಮ ಅವರ ಶವವನ್ನು ನೀರಿನಿಂದ ಹೊರತೆಗೆದಿದ್ದು, ಮತ್ತೊಬ್ಬರ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.