ಬೆಂಗಳೂರು: ಶೇಷಾದ್ರಿಪುರದ ನಾರ್ಥ್ ಬ್ಲಾಕ್ ರಸ್ತೆಯಲ್ಲಿ ಪಾನಮತ್ತ ದುಷ್ಕರ್ಮಿಗಳು ಬುಧವಾರ ರಾತ್ರಿ ರಮೇಶ್ (27) ಎಂಬ ಹೋಟೆಲ್ ಕಾರ್ಮಿಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ.
ಮೂಲತಃ ಹೊನ್ನಾವರದ ರಮೇಶ್, ಶೇಷಾದ್ರಿಪುರದ ಶಾಂತಿಸಾಗರ್ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಇತರೆ ಕಾರ್ಮಿಕರೊಂದಿಗೆ ಹೋಟೆಲ್ನ ಮಹಡಿಯ ಕೊಠಡಿಯಲ್ಲಿ ವಾಸವಾಗಿದ್ದರು.
ಹೋಟೆಲ್ನ ವಹಿವಾಟು ಮುಗಿದ ನಂತರ ರಾತ್ರಿ 11.30ರ ಸುಮಾರಿಗೆ ಅವರು ಸಂದೀಪ್, ಸುರೇಂದ್ರ, ಜಯರಾಮ್ ಮತ್ತು ಪ್ರಸಾದ್ ಎಂಬ ಕಾರ್ಮಿಕರೊಂದಿಗೆ ಬಾರ್ ಒಂದರಲ್ಲಿ ಮದ್ಯಪಾನ ಮಾಡಿ ಕೊಠಡಿಗೆ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಸ್ವಸ್ತಿಕ್ ವೃತ್ತದ ಬಳಿಯ ಪಾದಚಾರಿ ಮಾರ್ಗದಲ್ಲಿ ಪಾನಮತ್ತನಾಗಿ ನಿಂತಿದ್ದ ಮಂಜು ಎಂಬಾತ ಸಹಚರರ ಜತೆ ಸೇರಿಕೊಂಡು ರಮೇಶ್ ಮತ್ತು ಸ್ನೇಹಿತರನ್ನು ಅಡ್ಡಗಟ್ಟಿದ್ದಾನೆ. ಈ ವೇಳೆ ಪರಸ್ಪರರ ಮಧ್ಯೆ ವಾಗ್ವಾದ ನಡೆದು ಜಗಳವಾಗಿದೆ. ನಂತರ ಮಂಜು ಮತ್ತು ಸಹಚರರು ರಮೇಶ್ ಅವರ ಮೊಬೈಲ್ ಕಿತ್ತುಕೊಂಡು ತೊಡೆಗೆ ಚಾಕುವಿನಿಂದ ಇರಿದಿದ್ದಾರೆ. ಅಲ್ಲದೇ, ಸಂದೀಪ್, ಸುರೇಂದ್ರ, ಜಯರಾಮ್ ಮತ್ತು ಪ್ರಸಾದ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ರಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದ ಅವರು ಸಾವನ್ನಪ್ಪಿದರು ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಘಟನೆ ನಂತರ ಸ್ಥಳದಲ್ಲಿ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಬೈಕ್ನ ನೋಂದಣಿ ಸಂಖ್ಯೆ ಆಧರಿಸಿ ಆರೋಪಿಗಳ ಗುರುತನ್ನು ಪತ್ತೆ ಮಾಡಲಾಗಿದೆ. ಸದ್ಯದಲ್ಲೇ ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶೇಷಾದ್ರಿಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.