ADVERTISEMENT

ಹೋಟೆಲ್‌ ವಹಿವಾಟು ಅವಧಿ ವಿಸ್ತರಣೆ

ಮಂಗಳವಾರ ಮಧ್ಯರಾತ್ರಿಯಿಂದ ಜಾರಿ: ಕಮಿಷನರ್‌

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 20:07 IST
Last Updated 5 ಮಾರ್ಚ್ 2014, 20:07 IST

ಬೆಂಗಳೂರು: ‘ರೆಸ್ಟೋರೆಂಟ್‌ ಮತ್ತು ಹೋಟೆಲ್‌ಗಳ ವಹಿವಾಟಿನ ಅವಧಿ­ಯನ್ನು ರಾತ್ರಿ ಒಂದು ಗಂಟೆವರೆಗೆ ವಿಸ್ತ­ರಣೆ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶ­ವನ್ನು ಮಂಗಳ­ವಾರ ಮಧ್ಯರಾ­ತ್ರಿ­ಯಿಂದ ಅನ್ವಯ­­­ವಾಗು­ವಂತೆ ಜಾರಿ­ಗೊ­ಳಿ­ಸ­ಲಾಗಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ರಾಘವೇಂದ್ರ ಔರಾದಕರ್‌ ತಿಳಿಸಿದ್ದಾರೆ.

‘ನಗರದಲ್ಲಿ ಬಾರ್‌, ರೆಸ್ಟೋರೆಂಟ್‌ ಮತ್ತು ಹೋಟೆಲ್‌ಗಳ ವಹಿವಾಟಿನ ಅವಧಿಯನ್ನು ವಿಸ್ತರಿಸುವ ಸಂಬಂಧ ಫೆ.22ರಂದು ಸರ್ಕಾರದ ಮುಖ್ಯ ಕಾರ್ಯ­ದರ್ಶಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿತ್ತು.  ಸಾರ್ವಜನಿಕರು ಪಾಲ್ಗೊಂ­ಡಿದ್ದ ಈ ಸಭೆಯಲ್ಲಿ ವಹಿವಾಟಿನ ಅವಧಿ­ಯನ್ನು ವಿಸ್ತರಿಸುವ ಬಗ್ಗೆ ಚರ್ಚೆ ನಡೆಯಿತು. ನಂತರ ವಹಿವಾಟಿನ ಅವಧಿ­ಯನ್ನು ಮೂರು ತಿಂಗಳ ಅವಧಿಗೆ ಪ್ರಾಯೋಗಿಕವಾಗಿ ವಿಸ್ತರಣೆ ಮಾಡುವ ನಿರ್ಧಾರಕ್ಕೆ ಬರಲಾಯಿತು’ ಎಂದು ಔರಾದಕರ್‌ ಹೇಳಿದ್ದಾರೆ.

‘ಸಾರ್ವಜನಿಕರಿಗೆ ಊಟಕ್ಕೆ ಸಮಸ್ಯೆ­ಯಾಗಬಾರದು ಎಂಬ ಕಾರಣಕ್ಕೆ ರೆಸ್ಟೋ­ರೆಂಟ್‌ ಮತ್ತು ಹೋಟೆಲ್‌ಗಳ ವಹಿವಾಟಿನ ಅವಧಿ ವಿಸ್ತರಣೆ ಮಾಡ­ಲಾ­ಗಿದೆ’ ಎಂದು ಸ್ಪಷ್ಟ­ಪಡಿಸಿದ್ದಾರೆ.

‘ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇ­ಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ರೈಲು ನಿಲ್ದಾಣ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್‌ಆರ್‌ಟಿಸಿ) ಬಸ್ ನಿಲ್ದಾಣ ಹಾಗೂ ಬಿಎಂಟಿಸಿ ಬಸ್‌ ನಿಲ್ದಾಣಗ­ಳ­ಲ್ಲಿ­ರುವ ಹೋಟೆಲ್‌ಗಳನ್ನು ದಿನದ 24 ಗಂಟೆಯೂ ತೆರೆಯಲು ಅವಕಾಶ ನೀಡ­ಲಾ­ಗಿದೆ’ ಎಂದು ಅವರು ಮಾಹಿತಿ ನೀಡಿದರು.
.....

‘ರೆಸ್ಟೋರೆಂಟ್‌ ಹಾಗೂ ಹೋಟೆಲ್‌ಗಳು ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಒಂದು ಗಂಟೆಯವರೆಗೆ ತೆರೆಯಬಹುದು. ನಂತರದ ಅವಧಿಯಲ್ಲಿ ವಹಿ­ವಾಟು ನಡೆಸಿದರೆ ಕ್ರಮ ಕೈಗೊಳ್ಳ­ಲಾಗುವುದು. ಈ ಆದೇಶವು 90 ದಿನಗಳ ಕಾಲ ಚಾಲ್ತಿಯಲ್ಲಿ­ರುತ್ತದೆ’

-ರಾಘವೇಂದ್ರ ಔರಾದಕರ್‌, ನಗರ ಪೊಲೀಸ್‌ ಕಮಿಷನರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT