ADVERTISEMENT

‘ಅಂದಿನವರು ಮೌನ ಸಾಧಕರು’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 20:11 IST
Last Updated 16 ಡಿಸೆಂಬರ್ 2013, 20:11 IST

ಬೆಂಗಳೂರು: ‘ಬದುಕು– ಬರಹವನ್ನು ಒಟ್ಟಿಗೆ ಹಿಡಿದಿಟ್ಟ ಅಂದಿನವರು ಮೌನ ಸಾಧಕರು. ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ’ ಎಂದು ಸಾಹಿತಿ ಪ್ರೊ.ಎಸ್‌.ಜಿ. ಸಿದ್ಧರಾಮಯ್ಯ ಹೇಳಿದರು.

ಬಿ.ಎಂ.ಶ್ರೀ ಸ್ಮಾರಕ ಪ್ರತಿಷ್ಠಾನವು ನಗರದಲ್ಲಿ ಸೋಮವಾರ ಆಯೋ ಜಿಸಿದ್ದ  ‘ಪ್ರೊ.ವಿ.ಎಂ. ಇನಾಂ ದಾರ್‌– ನೂರೊಂದು ನೆನಪು’ ಕಾರ್ಯಕ್ರಮ ದಲ್ಲಿ ಪ್ರೊ.ಎಂ.ವಿ. ಇನಾಂದಾರ್‌ ಅವರ ನೆನಪಿನ ಸಂಪುಟ 2 ನೇ ಆವೃತ್ತಿಯಾದ ‘ಕಾದಂಬರಿ ಲೋಕ’ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ಇಂದು ಸಾಹಿತ್ಯ ಲೋಕದಲ್ಲಿ ಕಡು ಛಾಯೆ ಆವರಿಸಿದೆ. ಬಿಳಿಯದನ್ನು ಕಪ್ಪು ಮಾಡುವ ಮತ್ತು ಕಪ್ಪನ್ನು ಬಿಳಿಯಂತೆ ಬಿಂಬಿಸುವ ಪ್ರವೃತ್ತಿ ಇಂದು ಹೆಚ್ಚಾಗುತ್ತಿದೆ. ಸಮಕಾ ಲೀನತೆಯಲ್ಲಿ ನಿರಾಶೆ ತುಂಬಿದೆ’ ಎಂದು ವಿಷಾದಿ ಸಿದರು.

‘ಬದುಕಿನೊಳಗಿನ ತೀವ್ರತೆಯನ್ನು ಹಿಡಿದಿಟ್ಟು ಅದನ್ನು ಓದುಗರ ಅನುಭವವನ್ನಾಗಿ ಮಾಡುವುದೇ ಕಾದಂಬರಿಯಾಗಿದೆ. ಇನಾಂದಾರ್‌ ಅವರ ಕಾದಂಬರಿಯಲ್ಲಿನ ಪಾತ್ರಗಳು ಓದುಗರ ಅನುಭವದ ಕಥನದಂತೆ ಕಂಡುಬರುತ್ತವೆ ’ ಎಂದರು.

‘ಅವರು ಮುಂಬೈನ ಚಿತ್ರಣದಲ್ಲಿ ಕಟ್ಟಿಕೊಟ್ಟ ಕಾದಂಬರಿಗಳು ನಾನು ಅಲ್ಲಿ ಹೋದಾಗ, ಅವರ ಪಾತ್ರಗಳು ಅಲ್ಲಿಯೇ ಎಲ್ಲೋ ಓಡಾಡಿದ್ದಿರಬೇಕು ಎಂದು ಕಲ್ಪನೆ ಬರುವಷ್ಟು ನನ್ನ ಮನಸ್ಸನ್ನು ತಟ್ಟಿದ್ದವು. ಆದರೆ, ಅವರ ಪಾತ್ರಗಳ ಕಲ್ಪನೆ ಮೂಡಿದ ಅಂದಿನ ಮುಂಬೈಗೂ, ಇಂದಿನ ಮುಂಬೈಗೂ ಬಹಳ ವ್ಯತ್ಯಾಸವಿದೆ’ ಎಂದರು.

ಸಾಹಿತಿ ವಿಜಯಾ ಸುಬ್ಬರಾಜ್‌ ಮಾತನಾಡಿ, ‘ಇನಾಂದಾರ್‌ ಅವರು ಬಹುಮುಖ ಪ್ರತಿಭೆ. ಕಾದಂಬರಿ ಲೋಕದಲ್ಲಿ ಅನನ್ಯವಾಗಿ ಬರೆದು, ಸೃಜನಶೀಲ ಕವಿಯೆನಿಸಿಕೊಂಡರು. ಕಾದಂಬರಿ ರಚನೆ ಮೂಲಕ ಬಹು ಜನರನ್ನು ಹಿಡಿದಿಟ್ಟವರು’ ಎಂದರು.

ವಸಂತ ಪ್ರಕಾಶನವು ಹೊರ ತಂದಿರುವ ‘ಕಾದಂಬರಿ ಲೋಕ’ ಕೃತಿಯ ಬೆಲೆ ₨ 300.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.